ರಾಂಚಿ: ಪತ್ನಿ ಮತ್ತು ಮಕ್ಕಳನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹಿಂದಿರುಗುತ್ತಿದ್ದ ಸಹಾಯಕ ಎಂಜಿನೀಯರ್ ಕಾರ್ ರಸ್ತೆ ಬದಿಯ ಮಾವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರ್ ಸಂಪೂರ್ಣ ಜಖಂ ಆಗಿದ್ದು, ಟೆಕ್ಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಜಾರ್ಖಂಡ್ ರಾಜ್ಯದ ಭರನೋ ಬಳಿಯ ಎನ್ಎಚ್-23ರಲ್ಲಿ ಅಪಘಾತ ಸಂಭವಿಸಿದೆ. ಜೀವನ್ ಭಗತ್ ಅಪಘಾತದಲ್ಲಿ ಮೃತಪಟ್ಟ ಸಹಾಯಕ ಎಂಜಿನೀಯರ್. ಜೀವನ್ ರಾಂಚಿ ಪಟ್ಟಣದ ನಿವಾಸಿಯಾಗಿದ್ದು, ಪತ್ನಿ ಬನಾರಸದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು.
ಭಾನುವಾರ ಪತ್ನಿ ಮತ್ತು ಮಕ್ಕಳನ್ನು ರೈಲ್ವೇ ನಿಲ್ದಾಣಕ್ಕೆ ಬಿಟ್ಟು ಭರನೋ ನಗರಕ್ಕೆ ಹಿಂದಿರುಗುತ್ತಿದ್ದರು. ಭಡಗಾಂವ್ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರ್ ನೇರವಾಗಿ ರಸ್ತೆ ಬದಿಯ ಮಾವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮೇಲ್ಭಾಗ ಅಪ್ಪಚ್ಚಿಯಾಗಿದ್ದರಿಂದ ಜೀವನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರ್ ಮೇಲ್ಭಾಗವನ್ನು ಕತ್ತರಿಸಿ, ಜೀವನ್ ಮೃತ ದೇಹವನ್ನು ಹೊರ ತೆಗೆದಿದ್ದಾರೆ.