ಮಂಡ್ಯ: ದರ್ಶನ್ ʻಕಾಟೇರʼ ಸಿನಿಮಾದಲ್ಲಿ (Kaatera Cinema) ನಟಿಸಿದ್ದ ಬಾಲನಟ ಮಾಸ್ಟರ್ ರೋಹಿತ್ (Master Rohit) ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರೋಹಿತ್ ಗಾಯಗೊಂಡಿದ್ದಾರೆ. ಸದ್ಯ ಮಾಸ್ಟರ್ ರೋಹಿತ್ಗೆ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಘಟನೆ ನಡೆದಿದೆ, ಘಟನೆಯಲ್ಲಿ ರೋಹಿತ್ ತಾಯಿಯೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ʻಒಂದಲ್ಲ ಎರಡಲ್ಲʼ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತನಾಗಿದ್ದ ರೋಹಿತ್, ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದರು.