ಮುಂಬೈ: ಐಪಿಎಲ್ ಟೂರ್ನಿಯ ಡೆಲ್ಲಿ, ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂದ್ಯದ ವೇಳೆ ಡೆಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.
ಪಂದ್ಯದ ವೇಳೆ ರಿಷಬ್ ಆಡಿದ ಮಾತು ಸ್ಟಂಪ್ ಮೈಕಿನಲ್ಲಿ ದಾಖಲಾಗಿದ್ದು, ಈ ಮಾತು ಕೇಳಿದ ಹಲವು ನೋಡುಗರು ಪಂದ್ಯ ಫಿಕ್ಸ್ ಆಗಿತ್ತಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪಂದ್ಯದ ವೇಳೆ ರಬಿನ್ ಉತ್ತಪ್ಪ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ರಿಷಬ್ ‘ಈ ಎಸೆತ ಖಚಿತವಾಗಿ ಬೌಂಡರಿ ಗೆರೆ ದಾಟುತ್ತದೆ’ ಎಂದು ತಿಳಿಸಿದ್ದರು. ಕಾಕತಾಳೀಯ ಎಂಬಂತೆ ಆ ಎಸೆತದಲ್ಲಿ ಉತ್ತಪ್ಪ ಬೌಂಡರಿ ಸಿಡಿಸಿದರು.
#matchfixing to the highest order. when will @iplt20 @bcci.tv @icc @bcci.cricket ever wake up. #shameful #RishabhPant pic.twitter.com/WJQ1YEKUqn
— Himanshu Purohit (@Himansh256370) April 1, 2019
ರಿಷಬ್ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಹಲವರು ಈ ಬಗ್ಗೆ ಪ್ರಶ್ನೆ ಮಾಡಿದ್ದು. ಬೌಲರ್ ಚೆಂಡು ಎಸೆಯುವ ಮುನ್ನವೇ ರಿಷಬ್ ಬೌಂಡರಿ ಸಿಡಿಸಲಿದ್ದಾರೆ ಎಂದು ಹೇಳಿದ್ದು ಹೇಗೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೇ ಐಪಿಎಲ್ ಎಂದರೆ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂಬ ಹಲವು ಟೀಕೆಗಳು ಕೂಡ ಕೇಳಿ ಬಂದಿತ್ತು.
ಇದರ ನಡುವೆ ರಿಷಬ್ ಮಾತಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರು, ರಿಷಬ್ ಮಾತನ್ನು ತಪ್ಪಾಗಿ ಆರ್ಥೈಸಲಾಗಿದೆ. ಆತನ ಹೇಳಿಗೂ ಮುನ್ನ ರಿಷಬ್ ಏನು ಮಾತನಾಡಿದ್ದರು ಎಂಬುವುದು ಯಾರಿಗೂ ತಿಳಿದಿಲ್ಲ. ರಿಷಬ್ ತಂಡದ ನಾಯಕನಿಗೆ ಆಫ್ ಸೈಡ್ ಭಾಗದಲ್ಲಿ ಆಟಗಾರರ ಸಂಖ್ಯೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿಯೇ ಮಾತನಾಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.