ಬೆಂಗಳೂರು: ಪಬ್ಲಿಕ್ ಟಿವಿಗೆ (Public TV) 14 ವರ್ಷ ತುಂಬಿದೆ. ಆ ಲೆಕ್ಕಾಚಾರದಲ್ಲಿ ನೋಡಿದರೆ ಸಂಸ್ಥೆಗೆ ಇನ್ನೂ ಟೀನೇಜ್ (ಹದಿಹರೆಯ). ಯಾರೇ ಹಿರಿಯ ಪತ್ರಕರ್ತರಿಗೆ ಸರ್ ಅಂತ ಕರೆಯುತ್ತಾರೆ. ಆದರೆ, ಇವರಿಗೆ ಮಾತ್ರ ರಂಗಣ್ಣ (H.R.Ranganath) ಅಂತ ಕರೆಯೋದು. ಯಾಕಂದ್ರೆ ಅಣ್ಣನ ರೀತಿ ಫೀಲ್ ಆಗುತ್ತೆ ಎಂದು ಕಾಂತಾರ ನಟ ರಿಷಬ್ ಶೆಟ್ಟಿ (Rishab Shetty) ಹೇಳಿದರು.
ಅವರ ಕನಸು ಈ ಸಮಾಜಕ್ಕೆ ಸರಿಯಾದ ಸುದ್ದಿಯನ್ನು, ಮಾರ್ಗದರ್ಶನ ನೀಡುವುದು. ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕರೆದುಕೊಂಡು ಹೋಗುವುದು ಬಹುಮುಖ್ಯ ಅಂಗ ಪತ್ರಿಕೋದ್ಯಮ. ಅದರ ಶಕ್ತಿ ಸಮಾಜದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಬೀರುತ್ತೆ ಅನ್ನೋದಕ್ಕೆ ಪಬ್ಲಿಕ್ ಟಿವಿಯಂತಹ ಸಂಸ್ಥೆಯೇ ಉದಾಹರಣೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಕನ್ನಡದ ಎಲ್ಲರ ಮನೆಯ ರಂಗಣ್ಣ: ‘ಪಬ್ಲಿಕ್ ಟಿವಿ’ ವಾರ್ಷಿಕೋತ್ಸವಕ್ಕೆ ಡಾಲಿ ಧನಂಜಯ್ ವಿಶ್
ರಂಗಣ್ಣ ಅವರು ಟಿವಿಯಲ್ಲಿ ಕೂತಾಗ ಎಲ್ಲರನ್ನೂ ಬೈಯ್ಯುತ್ತಿರುತ್ತಾರೆ. ಒಬ್ಬರನ್ನೂ ಬಿಡಲ್ಲ ಅವರು. ಇದು ತಪ್ಪು, ಇದು ಸರಿ ಅಂತ ಹೇಳುತ್ತಾ ತಿದ್ದುತ್ತಿರುತ್ತಾರೆ. ಇಂತಹ ಪಬ್ಲಿಕ್ ಟಿವಿ ಸಂಸ್ಥೆಗೆ 14 ವರ್ಷ ತುಂಬಿದ ಸಂದರ್ಭದಲ್ಲಿ ಯೋಧರು ಮತ್ತು ಕುಟುಂಬದವರಿಗೆ ಸನ್ಮಾನ ಮಾಡಿದ್ದಾರೆ. ಸಾಮಾನ್ಯವಾಗಿ ಸನ್ಮಾನ ಅಂದ್ರೆ ಶಾಲು, ಹಾರ, ಹಣ್ಣಿನ ಬುಟ್ಟಿ, ಒಂದು ಶೀಲ್ಡ್ ಕೊಡೋದು ಅಷ್ಟೆ. ಆದರೆ, ಯೋಧರ ಜೀವನ ಹೇಗಿದೆ? ಎಷ್ಟು ಕಷ್ಟದಲ್ಲಿದ್ದಾರೆ? ಅವರಿಗೆ ಏನು ಸಹಕಾರ ಆಗಬೇಕು? ಏನನ್ನು ಮಾಡಿದರೆ ಅವರು ಮತ್ತು ಕುಟುಂಬಕ್ಕೆ ಒಳ್ಳೆಯದಾಗುತ್ತೆ ಎಂಬ ಯೋಚನೆ ಬಂದಾಗಲೇ ಅದು ನಿಜವಾದ ಸನ್ಮಾನ ಎಂದು ಪಬ್ಲಿಕ್ ಟಿವಿಯ ‘ಸಿಂಧೂರ ಸಮ್ಮಾನ’ಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ರಂಗಣ್ಣ ಅವರು ಪ್ರಿನ್ಸಿಪಾಲ್ ಇದ್ದಂಗೆ. ಯಾವುದೇ ಅಧಿಕಾರಿ, ರಾಜಕಾರಣಿ ಇರಲಿ. ತಕ್ಷಣ ಅವರಿಗೆ ಫೋನ್ ಮಾಡಿ ಇಂತಹ ಕೆಲಸ ಆಗಬೇಕು ಅಂತ ಸಲಹೆ ಕೊಡ್ತಾರೆ. ಇಲಾಖೆಯ ಅಧಿಕಾರಿಗಳಾಗಲಿ, ಮಂತ್ರಿಗಳು, ರಾಜಕಾರಣಿಗಳೆಲ್ಲರೂ ರಂಗಣ್ಣ ಅವರ ಮಾತು ಕೇಳ್ತಾರೆ. ಯಾಕಂದ್ರೆ ರಂಗಣ್ಣ ಅವರ ಮೇಲಿರುವ ಅಭಿಮಾನ. ಅವರು ಹೇಳಿದ್ರೆ ಅದು ಸರಿಯಾಗಿರುತ್ತೆ ಅಂದುಕೊಳ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಆಟೋ ಡ್ರೈವರ್ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್ ಮಾಸ್ ಹೀರೋ: ನೀನಾಸಂ ಸತೀಶ್ ಬಣ್ಣನೆ
ರಂಗಣ್ಣ ಸರ್ ಈ ಸಮಾಜಕ್ಕೆ ನೀವು ಒಂದು ದೊಡ್ಡ ಕೊಡುಗೆ. ಪಬ್ಲಿಕ್ ಟಿವಿಯಂತಹ ಸಂಸ್ಥೆಗೆ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ. ಸಂಸ್ಥೆ ಇಲ್ಲಿವರೆಗೆ ಬೆಳೆದಿದೆ. ಇನ್ನೂ ನೂರಾರು ವರ್ಷಗಳು ಬೆಳೆಯುವುದಕ್ಕೆ ಈ ಕಾರ್ಯಕ್ರಮಗಳು ಅರ್ಥಪೂರ್ಣ. ಮೊದಲಿನಿಂದಲೂ ನಿಮ್ಮ 9 ಗಂಟೆಯ ಬಿಗ್ ಬುಲೆಟಿನ್ ಕಾರ್ಯಕ್ರಮಕ್ಕೆ ನಾವು ಫಾಲೋವರ್ಸ್. ಸುಮಾರು ವಿಷಯಗಳನ್ನು ನಿಮ್ಮಿಂದ ನಮ್ಮಲ್ಲಿ ಅಳವಡಿಸಿಕೊಂಡಿದ್ದೇವೆ. ಏನೇನೊ ಕಷ್ಟಗಳು ಬರುತ್ತವೆ. ಅದನ್ನು ಎದುರಿಸುತ್ತೇವೆ. ಫೇಸ್ ಮಾಡಿ ಮುಂದೆ ಹೋಗಬೇಕು ಅಂದಾಗಲೆಲ್ಲ ಫಸ್ಟ್ ನಮ್ಮ ತಲೆಗೆ ಬರುವುದೇ ‘All Right ಮುಂದಕ್ಕೋಗೋಣ’ ಎಂದು ಹೆಚ್.ಆರ್.ರಂಗನಾಥ್ ಅವರ ಫೇಮಸ್ ಡೈಲಾಗ್ ಹೊಡೆದರು ರಿಷಬ್ ಶೆಟ್ಟಿ.
ನಾನೊಬ್ಬ ಪುಟ್ಟ ಕಲಾವಿದ. ಕನಸು ಕಟ್ಟಿಕೊಂಡು ಬಂದಿದ್ದಂತೂ ನಿಜ. ದೇವರು ಮತ್ತು ನಿಮ್ಮ ಆಶೀರ್ವಾದ ನಮ್ಮನ್ನು ಇಲ್ಲಿವರೆಗೆ ಕರೆದುಕೊಂಡು ಬಂತು ಎಂದು ಮಾತನಾಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ 14ರ ಸಂಭ್ರಮ – ವೀರ ಯೋಧರಿಗೆ ಸಿಂಧೂರ ಸಮ್ಮಾನ


