ಬೆಂಗಳೂರು: ಕಿರಿಕ್ ಪಾರ್ಟಿ ಡೈರೆಕ್ಟರ್ ರಿಷಬ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರ ಡಿಟೆಕ್ಟಿವ್ ದಿವಾಕರ, ಕನ್ನಡಿಗರ ಮನೆ ಮನ ಗೆದ್ದು, ಈಗಾಗಲೇ 50 ದಿನದತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾವನ್ನು ಒಲವೇ ಮಂದಾರ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಸದ್ಯ ಬೆಲ್ ಬಾಟಂ ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದು, ಆಯಾ ಭಾಷೆಗಳಲ್ಲಿ ಬೆಲ್ ಬಾಟಂನ್ನು ಯಾರು ಧರಿಸುತ್ತಾರೋ ಅನ್ನೋ ಕುತೂಹಲ ಎಲ್ಲರಲ್ಲಿದೆ.
ಕನ್ನಡದಲ್ಲಿ ರಿಷಬ್ ಶೆಟ್ಟಿ ಮಾಡಿದ್ದ ಡಿಟೆಕ್ಟಿವ್ ಪಾತ್ರವನ್ನು ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಅಭಿನಯಿಸುವ ಸಾಧ್ಯತೆ ಇದೆಯಂತೆ. ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಿರುವ ಸಾಹಸ ನಿರ್ದೇಶಕ ರವಿ ವರ್ಮ ಆಯುಷ್ಮಾನ್ ಖುರಾನ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರಂತೆ. ಇನ್ನು ಆಯುಷ್ಮಾನ್ ನಿರ್ಧಾರವನ್ನಷ್ಟೇ ಹೇಳಬೇಕಿದೆ. ತೆಲುಗಿನಲ್ಲಿ ನಾನಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಾಲಿವುಡ್ ನಲ್ಲಿ ನಟ ಆರ್ಯ ಪತ್ತೇದಾರಿ ದಿವಾಕರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಷ್ಟೇ ಹೊರ ಬೀಳಬೇಕಿದೆ.
ಈಗಾಗಲೇ ಮೂರು ಭಾಷೆಗಳಲ್ಲಿ ರಿಮೇಕ್ ಹಕ್ಕು ಸೋಲ್ಡ್ ಔಟ್ ಆಗಿದೆ. ಎಪ್ಪತ್ತು ಎಂಬತ್ತರ ದಶಕದ ಕಾಲಘಟ್ಟದಲ್ಲಿ ನಡೆಯುವ ಚಿತ್ರದ ಪತ್ತೇದಾರಿ ಕಥೆ ಈಗ ಕರ್ನಾಟಕದಿಂದ ಗಡಿದಾಟಲು ರೆಡಿಯಾಗಿದೆ. ಕನ್ನಡದಲ್ಲಿ ಅಬ್ಬರಿಸಿದ ದಿವಾಕರ ಮಿಕ್ಕ ಭಾಷೆಗಳಲ್ಲಿ ಹೇಗೆಲ್ಲಾ ಕಮಾಲು ಮಾಡಬಹುದೆಂಬುದನ್ನು ಕಾದುನೋಡಬೇಕಿದೆ.