ಚಿಕ್ಕಮಗಳೂರು: ಚಿಲ್ಲರೆ ಹಣಕ್ಕಾಗಿ ಮದ್ಯವ್ಯಸನಿಗಳು ಬಾರ್ ಕ್ಯಾಶಿಯರ್ ಜೊತೆ ಜಗಳವಾಡಿ ಆತನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಯಶ್ಪಾಲ್(28) ಮೃತ ದುರ್ದೈವಿ. ಯುಗಾದಿ ಹಬ್ಬದ ದಿನದಂದು ಆರು ಜನ ಯುವಕರು ಸಖರಾಯಪಟ್ಟಣ ಸಮೀಪದ ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿದ್ದರು. ಅಲ್ಲಿಂದ ಬಂದವರು ಮದ್ಯದ ಖರೀದಿಗೆ ಸಖರಾಯಪಟ್ಟಣದ ಬಾರ್ಗೆ ಬಂದಿದ್ದರು. ಬಿಯರ್ ಖರೀದಿಸಿದ ಬಳಿಕ ಚಿಲ್ಲರೆ ಹಣಕ್ಕಾಗಿ ಬಾರಿನ ಮತ್ತೊಬ್ಬ ಕ್ಯಾಶಿಯರ್ ಲಕ್ಷ್ಮೀಶ್ ಜೊತೆ ಮಾತಿನ ಚಕಮಕಿ ನಡೆದಿದೆ. ಹತ್ತು ರೂಪಾಯಿ ಚಿಲ್ಲರೆ ಹಣಕ್ಕಾಗಿ ಗಲಾಟೆ ಮಾಡಿದ್ದರು ಎಂದು ಹೇಳಲಾಗಿದೆ.
ಈ ವೇಳೆ, ಬಾರ್ ಮುಂದೆ ಇದ್ದ ಬೈಕನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಬೈಕ್ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವುದನ್ನು ಕಂಡು ಯಶ್ಪಾಲ್ ಆಕ್ಷೇಪಿಸಿದ್ದಾರೆ. ಜನ ಓಡಾಡಲು ತೊಂದರೆಯಾಗುತ್ತೆ. ಪೊಲೀಸರು ಬಂದರೆ ಬೈಯುತ್ತಾರೆ, ಗಾಡಿಗಳನ್ನು ತೆಗೆಯಿರಿ ಎಂದಿದ್ದಾನೆ. ಇದನ್ನೂ ಓದಿ: ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದ್ರೆ ಓಟ್ ಹಾಕಿ ಕೂಲಿ ಕೊಡಿ: ಪ್ರೀತಂಗೌಡ
ಇದರಿಂದ ಕೋಪಗೊಂಡ ಆರು ಜನರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಕೆಲಸ ಮುಗಿಸಿ ರಾತ್ರಿ 9ಗಂಟೆ ಸುಮಾರಿಗೆ ಮನೆಗೆ ಹೋದ ಯಶ್ಪಾಲ್ ತೀವ್ರ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಬಳಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಹುಟ್ಟೂರು ಚಿಕ್ಕಮಾಗರಹಳ್ಳಿ ಜಾತ್ರೆಯಲ್ಲಿ ಮುಸ್ಲಿಮರಿಗೆ ಬ್ಯಾನ್
ಮೃತ ಯಶ್ಪಾಲ್ ಮನೆಯವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಡಕುಟುಂಬದ ಯಶ್ಪಾಲ್ ಏಳೆಂಟು ವರ್ಷಗಳಿಂದ ಬಾರ್ನಲ್ಲಿ ಕ್ಯಾಶಿಯರ್ ಆಗಿ ತಾಯಿಯನ್ನು ನೋಡಿಕೊಳ್ಳುತ್ತಿದ್ದ. ಮನೆಗೆ ಅವನೇ ಆಧಾರಸ್ತಂಭವಾಗಿದ್ದ. ತಾಯಿ-ಮಗ ಇಬ್ಬರೇ ವಾಸವಿದ್ದು, ಇದೀಗ ಮಗನನ್ನು ಕಳೆದುಕೊಂಡು ತಾಯಿಯ ಆಸರೆಗೆ ಯಾರೂ ಇಲ್ಲದಂತಾಗಿದೆ. ಪ್ರಕರಣ ದಾಖಲಿಸಿಕೊಂಡ ಸಖರಾಯಪಟ್ಟಣ ಪೊಲೀಸರು ಯಶ್ಪಾಲ್ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರಿನ ನರಿಗುಡ್ಡನಹಳ್ಳಿ ರಘು, ಹೌಸಿಂಗ್ ಬೋರ್ಡ್ ಪ್ರಕಾಶ್, ಕಲ್ಯಾಣ ನಗರದ ಯಶೀಶ್, ತರೀಕೆರೆಯ ಶ್ರೀಧರ್, ಮಂಜುನಾಥ್, ಬೀರೂರು-ಅಜ್ಜಂಪುರ ರಸ್ತೆಯ ಸಂಜಯ್ ಎಂಬ ಆರು ಆರೋಪಿಗಳನ್ನು ಬಂಧಿಸಿದ್ದಾರೆ.