ಗದಗ: ನೂರಾರು ಅನಾಥ ಗೋವುಗಳಿಗೆ ಕಳೆದ 20 ವರ್ಷಗಳಿಂದ ಫಲಾಪೇಕ್ಷೆಯಿಲ್ಲದೆ ಪೋಷಣೆ ಮಾಡ್ತಿದ್ದಾರೆ ಇವತ್ತಿನ ಪಬ್ಲಿಕ್ ಹೀರೋ ರಿಖಪ್ ಚಂದ್ರ.
ಹೌದು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿ ರಿಖಪ್ಚಂದ್ ಬಾಗಮಾರ ಎಂಬವರು ಆಧುನಿಕ ಗೋರಕ್ಷಕರು. ಇವರು ಭಗವಾನ್ ಮಹಾವೀರ ಜೈನ್ ಗೋಶಾಲೆ ಮೂಲಕ ನೂರಾರು ಅನಾಥ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ. ಮೂಲತ: ಬಟ್ಟೆ ವ್ಯಾಪಾರಿಗಳಾದ್ರೂ ಜಾನುವಾರಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ.
ತಂದೆ ಸುಖರಾಜ್ ಅವ್ರ ಕೊನೆ ಆಸೆಯದಂತೆ ಸುಮಾರು 20 ವರ್ಷಗಳಿಂದ ಇನ್ನೂರಕ್ಕೂ ಅಧಿಕ ಗೋವುಗಳಿಗೆ ಆಶ್ರಯ ನೀಡುತ್ತಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಗೋವುಗಳಿಗೆ ನಮಸ್ಕರಿಸಿ ಮಂತ್ರಪಠಿಸಿ ಬಿಸಿನೆಸ್ಗೆ ಹೋಗ್ತಾರೆ.
ಗಜೇಂದ್ರಗಡ ನಗರದಲ್ಲಿ ಪ್ರತಿ ಮಂಗಳವಾರ ಜಾನುವಾರುಗಳ ಸಂತೆ ನಡೆಯುತ್ತೆ. ಈ ಸಂತೆಯಲ್ಲಿ ಕಟುಕರ ಪಾಲಾಗುವ ಜಾನುವಾರುಗಳನ್ನ ಇವರು ರೈತನಿಗೆ ಹೆಚ್ಚಿನ ಹಣನೀಡಿ ಖರೀದಿ ಮಾಡಿ ತರುತ್ತಿದ್ದಾರೆ. ರಾಜ್ಯದಲ್ಲಿ ಬರ ಇದ್ದಾಗಲೂ ಸರ್ಕಾರ, ಸಂಘ ಸಂಸ್ಥೆಗಳಿಂದ ನೆರವುಯಾಚಿಸದೇ 11 ಎಕರೆ ವಿಸ್ತೀರ್ಣದಲ್ಲಿ ಗೋರಕ್ಷೆ ಮಾಡುತ್ತಾ ಬಂದಿದ್ದಾರೆ.
ಪ್ರತಿ ವರ್ಷ ಸುಮಾರು 150 ರಿಂದ 200 ಟನ್ನಷ್ಟು ಮೇವು ಸಂಗ್ರಹಿಸ್ತಾರೆ. ಕುಟುಂಬ ಸದಸ್ಯರ ಜೊತೆಗೆ ಗೋವುಗಳ ರಕ್ಷಣೆಗಾಗಿ 15 ಜನ ಗೋಪಾಲಕರನ್ನ ನಿಯೋಜಿಸಿಕೊಂಡಿದ್ದಾರೆ.