ಯಾದಗಿರಿ: ಸರ್ಕಾರವೇ ಜನರ ಬಳಿ ಬಂದು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎನ್ನುವ ಕಾರಣಕ್ಕೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರಾರಂಭಿಸಿದ್ದೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕಾಲ ಬದಲಾದಂತೆ ಪರಿವರ್ತನೆ ಆಗಬೇಕು. ಆಡಳಿತ ವ್ಯವಸ್ಥೆ ಜನರಿದ್ದಲ್ಲಿಗೇ ಬರಬೇಕು. ತಹಶೀಲ್ದಾರ್ ಕಚೇರಿಗೆ, ಡಿಸಿ ಕಚೇರಿಗೆ ಅಲೆದಾಟ ತಪ್ಪಬೇಕು. ಹಾಗಾಗಿಯೇ ಕಂದಾಯ ಇಲಾಖೆ ಹಲವಾರು ಯೋಜನೆ ಜಾರಿಗೆ ತಂದಿದೆ. ಮನೆಬಾಗಿಲಿಗೆ ಪಿಂಚಣಿ, ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ, ಹೀಗೆ ಆಡಳಿತ ಜನಸ್ನೇಹಿ ಆಗುವತ್ತ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದೆ ಎಂದರು. ಇದನ್ನೂ ಓದಿ: ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್
ಜನಸಾಮಾನ್ಯರ ಮುಖ್ಯಮಂತ್ರಿ ಎನಿಸಿಕೊಂಡಿರುವ ಬೊಮ್ಮಾಯಿ ಈ ಭಾಗಕ್ಕೆ ನೀರಾವರಿ ಯೋಜನೆಗಳಿಗೆ ಹಲವಾರು ಕಾರ್ಯಕ್ರಮ ನೀಡಿ, ರೈತರಿಗೆ ಸೌಲಭ್ಯ ನೀಡಿದ್ದಾರೆ. ನಮ್ಮ ಸರ್ಕಾರದ ಉದ್ದೇಶ ಜನರಿಗೆ ಹತ್ತಿರ ಆಗಬೇಕು. ಜನಸಾಮಾನ್ಯರ ಬಳಿಗೆ ಸರ್ಕಾರವೇ ಹೋಗಿ ಸೌಲಭ್ಯಗಳನ್ನು ನೀಡಬೇಕು ಎನ್ನುವುದೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ಕೃಷ್ಣೆ ಮತ್ತು ಭೀಮ ನದಿಗಳ ಮಧ್ಯ ಇರುವ ಊರು ದೇವತ್ಕಲ್. ದೇವತೆಗಳು ವಾಸಿಸುವ ಊರು ಎನ್ನುವ ಕಾರಣಕ್ಕೆ ಈ ಹೆಸರು ಬಂದಿರಬಹುದು. ದೇವರಂತ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಐತಿಹಾಸಿಕವಾಗಿ, ಪೌರಾಣಿಕವಾಗಿ ಶ್ರೇಷ್ಠತೆ ಹೊಂದಿದ್ದು ಸುರಪುರ. ಸುರಪುರ ಸಂಸ್ಥಾನ ಕಟ್ಟಿ ಆಳಿದವರು ಗೋಸಲ ವಂಶದವರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾಪುರುಷ ನಾಲ್ವಡಿ ರಾಜಾ ವೆಂಕಟಪ್ಪ ನಾಯಕನನ್ನು ಮರೆಯುವ ಹಾಗೆ ಇಲ್ಲ. ಮಠಮಾನ್ಯಗಳು, ರೈತರಿಗೆ ಇರುವ ಬಸವಪುರ ಜಲಾಶಯ ಇವೆಲ್ಲ ಈ ಭಾಗದ ಹೆಗ್ಗುರುತು. ಜನರು ನೀಡಿದ ಸ್ವಾಗತದಿಂದ ಮನಸ್ಸು ತುಂಬಿದೆ ಎಂದರು. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌಹಾಣ್, ಸಂಸದರು, ಶಾಸಕ ರಾಜು ಗೌಡ ಹಾಗೂ ಇತರರು ಉಪಸ್ಥಿತರಿದ್ದರು.