ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಬಡ ರೈತ ಕುಟುಂಬವೊಂದು ದಯಾಮರಣ ಕೋರಿ ಧರಣಿ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವವರಿಗೆ ತಂದೆಯಿಂದ ವಿಲ್ ಮುಖಾಂತರ 1.15 ಎಕರೆ ಜಮೀನು ಬಂದಿತ್ತು. ಆದರೆ ಈ ಜಮೀನಿನ ಮೇಲೆ ಸಂಬಂಧಿಗಳು ಕಣ್ಣು ಹಾಕಿ ಸಿವಿಲ್ ಕೋರ್ಟ್, ತಹಸೀಲ್ದಾರ್ ಹಾಗೂ ಡಿಸಿ, ಎಸಿ ಕೋರ್ಟ್ ಗಳಲ್ಲಿ ಪ್ರಕರಣ ದಾಖಲು ಮಾಡಿದ್ದರು. ಕೊನೆಗೆ ಲಕ್ಷ್ಮಮ್ಮನವರಿಗೆ ಖಾತೆ ಮಾಡುವಂತೆ ಎರಡು ವರ್ಷದ ಹಿಂದೆಯೇ ನ್ಯಾಯಾಲಯ ನಿರ್ದೇಶನ ಮಾಡಿತ್ತು.
ಅಧಿಕಾರಿಗಳ ಎಡವಟ್ಟಿನಿಂದ ಲಕ್ಷ್ಮಮ್ಮನ ಹೆಸರಿಗೆ ಸರಿಯಾಗಿ ಖಾತೆಯಾಗಿರಲಿಲ್ಲ. ಈ ಬಗ್ಗೆ ಕಳೆದ ಎರಡು ವರ್ಷದಿಂದ ಲಕ್ಷ್ಮಮ್ಮ ಮತ್ತು ಆಕೆಯ ಕುಟುಂಬದವರು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ರೈತ ಕುಟುಂಬ ದಯಾಮರಣ ಕೋರಿ ದೇವನಹಳ್ಳಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀಗೌಡಗೆ ನ್ಯಾಯ ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ಪ್ರತಿಭಟನೆ ನಡೆಸಿ ತಮ್ಮ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv