ಬೆಂಗಳೂರು: ಗಾಂಧಿ ಜಯಂತಿಯ ಅಂಗವಾಗಿ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಸಹ ರಜೆ ಘೋಷಣೆ ಮಾಮೂಲಿ. ಆದರೆ ರಾಜಧಾನಿಯ ಕಂದಾಯ ಇಲಾಖೆಯ ಸಿಬ್ಬಂದಿ ಮಾತ್ರ ಇವತ್ತೂ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಪಬ್ಲಿಕ್ ಟಿವಿಯ ಕ್ಯಾಮೆರಾ ನೋಡಿ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.
ಹೌದು, ಕೆಲಸದ ದಿನಗಳಲ್ಲೇ ಸರ್ಕಾರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬರುವುದು ಸಹಜ. ಆದರೆ ಕಂದಾಯ ಇಲಾಖೆಯ ಸಿಬ್ಬಂದಿ ಮಾತ್ರ ಗಾಂಧಿ ಜಯಂತಿಯ ದಿನದಂದು ಸಹ ಕಛೇರಿಯಲ್ಲಿ ಬಿಡುವಿಲ್ಲದ ರೀತಿ ಕೆಲಸ ಮಾಡಿದ್ದಾರೆ. ಆದರೆ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡಿದ್ದೆ ತಡ ಕಕ್ಕಾಬಿಕ್ಕಿಯಾದ ಸಿಬ್ಬಂದಿ ಎದ್ನೋ, ಬಿದ್ನೋ ಎನ್ನುವ ರೀತಿಯಲ್ಲಿ ದಾಖಲೆಗಳನ್ನು ಎತ್ತಿಡಲು ಪ್ರಯತ್ನಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಜಾ ದಿನವೂ ಸಹ ಕಂದಾಯ ಭವನದಲ್ಲಿ ನಾಲ್ವರು ಸಿಬ್ಬಂದಿ ತಿದ್ದುಪಡಿ ಕೆಲಸವನ್ನು ಮಾಡಿದ್ದಾರೆ. ಕೈಯಲ್ಲಿ ಫೈಲ್ಗಳನ್ನು ಹಿಡಿದು, ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಿದ್ದರು. ಇದಲ್ಲದೇ ಉಪನೋಂದಣಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕರ(ಎಂಡಿ) ಕಛೇರಿಯನ್ನು ಸಹ ಓಪನ್ ಮಾಡಿದ್ದರು. ಎಂಡಿ ರಜಾದಲ್ಲಿದ್ದರೂ, ಅವರ ಛೇಂಬರ್ ಮಾತ್ರ ಓಪನ್ ಆಗಿತ್ತು.
ರಜಾ ದಿನದಲ್ಲೂ ಕೆಲಸ ಮಾಡುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪಬ್ಲಿಕ್ ಟಿವಿ ಕ್ಯಾಮೆರಾ ನೋಡಿದ್ದೆ ತಡ ಸಿಬ್ಬಂದಿ ತಬ್ಬಿಬ್ಬು ಆಗಿದ್ದಾರೆ. ಅಲ್ಲದೇ ತರಾತುರಿಯಲ್ಲಿ ಫೈಲುಗಳನ್ನು ಎತ್ತಿಡಲು ಮುಂದಾಗಿದ್ದಾರೆ.
ರಜಾ ಇದ್ದರೂ ಕೆಲಸ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿ ಒಬ್ಬರು, ಪೆಂಡಿಂಗ್ ಕೆಲಸ ಇದ್ದ ಕಾರಣ ಬಂದಿದ್ದೇವೆ. ನಾವು ಯಾವುದೇ ದಾಖಲೆ ತಿದ್ದುವ ಕೆಲಸ ಮಾಡುತ್ತಿಲ್ಲ ಎನ್ನುವ ಹಾರಿಕೆಯ ಉತ್ತರ ನೀಡಿದ್ದಾರೆ. ವಿಚಿತ್ರ ಏನೆಂದರೆ ಎಂಡಿ ಕಚೇರಿಗೆ ಬಾರದೇ ಇದ್ದರೂ ಅವರ ಕಛೇರಿ ಓಪನ್ ಆಗಿತ್ತು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉಪನೋಂದಣಿ ವಿಭಾಗದ ಎಂಡಿ ಕಛೇರಿಯ ಲಾಕರ್ ನಲ್ಲಿ ಅನೇಕ ಇಲಾಖೆಗಳಿಗೆ ಸಂಬಂಧಪಟ್ಟಂತೆ ದಾಖಲೆಗಳು ಇವೆ. ಒಂದು ವೇಳೆ ಈ ದಾಖಲೆಗಳು ಏನಾದರೂ ತಿದ್ದುಪಡಿಯಾದರೆ, ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗಳು ಎದುರಾಗಿದೆ.
ಕಂದಾಯ ಇಲಾಖೆಯ ಗುಪ್ತ್ ಗುಪ್ತ್ ಕಳ್ಳ ಕೆಲಸದ ಸಂಪೂರ್ಣ ಚಿತ್ರಣ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಕೂಡಲೇ ಸಿಎಂ ಕುಮಾರಸ್ವಾಮಿಯವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv