ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನಡೆದಿದ್ದು, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿರುವ ರೇವಣಸಿದ್ದಯ್ಯ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿನ್ನೆಯೇ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ ಅಂತ ಹೇಳುವ ಮೂಲಕ ಸಿಎಂ ಮೈಸೂರಿಗೆ ಬರುವ ದಿನವೇ ಶಾಕ್ ನೀಡಿದ್ದಾರೆ.
ನಾನು ಸ್ವಂತತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೆಗೌಡರನ್ನ ಬೆಂಬಲಿಸುತ್ತೇನೆ. ವರುಣಾದಲ್ಲಿ ಇನ್ನು ನಾಮಪತ್ರಗಳು ಮುಗಿದಿಲ್ಲ. ಹಾಗಾಗಿ ಸಮರ್ಥ ಅಭ್ಯರ್ಥಿ ಬೆಂಬಲಿಸುತ್ತೇನೆ. ಸಿದ್ದರಾಮಯ್ಯರನ್ನ ಸೋಲಿಸುವುದೇ ನನ್ನ ಗುರಿ. ಹಾಗಾಗಿ ಅವರ ವಿರುದ್ಧ ಅಭ್ಯರ್ಥಿಗಳಿಗೆ ಬಹಿರಂಗ ಬೆಂಬಲ ನೀಡುತ್ತೇನೆ. ಕಾಂಗ್ರೆಸ್ ಮೇಲೆ ನನಗೆ ಗೌರವ ಇದೆ. ಆದ್ರೆ ಸಿದ್ದರಾಮಯ್ಯ ನಡೆದುಕೊಂಡ ರೀತಿ ನನಗೆ ಬೆಸರ ಇದೆ. ನಾಯಿ ಕುನ್ನಿಗೆ ಬಿಸ್ಕೆಟ್ ಹಾಕುವ ರೀತಿ ನಡೆದುಕೊಂಡರು. ನಾನು ಒಳ್ಳೆ ಭಾಷೆಯಲ್ಲಿ ಹೇಳಿದ್ದೇನೆ ಅಷ್ಟೇ. ವರುಣಾ, ಚಾಮುಂಡೇಶ್ವರಿಯಲ್ಲಿ ಇರೋದು ಒಂದೇ ಬೇರು. ಆ ಬೇರು ಕಿತ್ತುಹಾಕೋದೆ ನನ್ನ ಗುರಿ ಅಂತ ಅವರು ಹೇಳಿದ್ರು.
ಸಿಎಂ ನನ್ನ ಮೂಗಿಗೆ ತುಪ್ಪ ಸವರುವ ರೀತಿ ಮಾತಾಡುತ್ತಲೇ ಇಷ್ಟು ದಿನ ಬಂದ್ರು. ಸರ್ಕಾರದಲ್ಲಿ ಯಾವುದೇ ಅವಕಾಶ ಸಿಗದೇ ಇದ್ದರೂ ಐದು ವರ್ಷ ಅವರ ಜೊತೆಯಲ್ಲಿ ಇದ್ದೆ. ಈಗ ನನ್ನನ್ನೂ ಸಂಪೂರ್ಣ ಕಡೆಗಣಿಸಿ ಬಿಟ್ಟರು. ನನಗೆ ಆದ ಎಲ್ಲಾ ಅಸಮಾಧಾನವನ್ನು ಸಿಎಂ ಮಗನಿಗೆ ವಿವರಿಸಿದ್ದೆ. ನಂತರ ಸಿಎಂ ಭೇಟಿ ಮಾಡಿದ್ದೆ. ಆಗ ಸಿಎಂ ಸಾಕು ಪ್ರಾಣಿಯನ್ನು ಮುದ್ದು ಮಾಡುವಂತೆ ನನ್ನ ಜೊತೆ ಮುದ್ದಾಗಿ ಮಾತಾಡಿದ್ದರು ಅಷ್ಟೇ. ನಾನು ಕಾಂಗ್ರೆಸ್ ನಲ್ಲಿ ಇದ್ದರೂ ಅವರ ನಾಮಪತ್ರ ಸಲ್ಲಿಕೆಗೆ ಮತ್ತು ಅವರ ಮಗನ ನಾಮಪತ್ರ ಸಲ್ಲಿಕೆಗೆ ನನ್ನನ್ನು ಆಹ್ವಾನಿಸಲಿಲ್ಲ. ಇದು ನನಗೆ ಹೆಚ್ಚು ಬೇಸರ ಮೂಡಿಸಿದೆ. ವೀರಶೈವ ಲಿಂಗಾಯತರಿಗೆ ಸಿಎಂ ಕೊಡುಗೆ ಶೂನ್ಯ. ವ್ಯಕ್ತಿ ಸಾಮಥ್ರ್ಯ ಹೆಚ್ಚಾಗಿ ಪಕ್ಷದ ಬಲ ಕುಸಿದ ಕಾರಣ ಬೇಸತ್ತು ರಾಜೀನಾಮೆ ನೀಡಿದ್ದೇನೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ.
ಲಿಂಗಾಯತರ ಒಡೆದು ರಾಜಕೀಯ ಮಾಡುವ ಪಿತೂರಿ ನಡೆದಿದೆ. ಇದು ಕ್ಷುದ್ರ ರಾಜನೀತಿ. ಈ ರಾಜನೀತಿ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು. ನಾನು ಯಾವ ಪಕ್ಷಕ್ಕೂ ಸೇರದೇ ಯಾರು ಉತ್ತಮರೋ ಅವರ ಗೆಲುವಿಗೆ ಪ್ರತ್ಯೇಕವಾಗಿ ಕೆಲಸ ಮಾಡುತ್ತೇನೆ. ನಾನೇ ರಾಜ, ನನ್ನ ಬಿಟ್ಟರೆ ಯಾರು ಇಲ್ಲ ಎನ್ನುವವರಿಗೆ ಪಾಠ ಕಲಿಸಬೇಕು ಅಂತ ಅವರು ಹೇಳಿದ್ದಾರೆ.
2004, 2008ರಲ್ಲಿ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರೇವಣಸಿದ್ದಯ್ಯ ಸೋತಿದ್ದರು. ಇದಾದ ಬಳಿಕ ಕಾಂಗ್ರೆಸ್ ಸೇರಿ 2013ರಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ್ದರು. ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಕಡೆಗಣಿಸಲಾಗಿತ್ತು. ಜಿಲ್ಲಾ ಹಾಗೂ ತಾಲೂಕು ಪಂಚಾತ್ ಚುನಾವಣೆಗಳಲ್ಲಿ ರೇವಣಸಿದ್ದಯ್ಯ ಅವರ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಿಲಾಗಿತ್ತು. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ನೆರವಾಗುವಾಗ ತಾರತಮ್ಯ ಮಾಡಿದ್ದಕ್ಕೆ ರೇವಣಸಿದ್ದಯ್ಯ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.