ಹುಬ್ಬಳ್ಳಿ: ರೇವಣ್ಣನ ಜ್ಯೋತಿಷ್ಯ, ಯಾವ ನಿಂಬೆ ಹಣ್ಣು ನಡೆಯುವುದಿಲ್ಲ. ಯಡಿಯೂರಪ್ಪನವರು ಸಿಎಂ ಆಗೇ ಆಗುತ್ತಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ ಸಿಎಂ ಆಗುವುದಿಲ್ಲ ಎನ್ನುವ ರೇವಣ್ಣ ಹೇಳಿಕೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್ವೈ ಸಿಎಂ ಆಗಿಯೇ ಆಗುತ್ತಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಸಿಎಂ ಆಗದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ತಡೆಯಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ಡಿಕೆಶಿ ಅವರು ಮಹಾ ಚತುರ. ಅವರು ಕುಂದಗೋಳಕ್ಕೆ ಬಂದು ಬೂಟಾಟಿಕೆ ಮಾಡುತ್ತಿದ್ದಾರೆ. ಭ್ರಷ್ಟದ ಹಣವನ್ನು ಇಲ್ಲಿ ನೀರು ಸುರಿಯುವ ರೀತಿ ಮತತದಾರನ್ನು ಖರೀದಿಸಲು ಸುರಿಯುತ್ತಿದ್ದಾರೆ. ಆದರೆ ಇಲ್ಲಿ ಇದ್ಯಾವುದು ನಡೆಯುವುದಿಲ್ಲ ಎಂದು ಕಿಡಿಕಾರಿದರು.
ಜಮೀರ್ ಅಹ್ಮದ್ ಅವರ ಬಗ್ಗೆ ಮಾತನಾಡಿ, ಜಮೀರ್ ಏನು ಎಂದು ನನಗೆ ಚೆನ್ನಾಗಿ ಗೊತ್ತು. ಅವರ ನಾಲಿಗೆಗೆ ಲಗಾಮು ಇಲ್ಲ. ಅವರು ಒಬ್ಬ ಕೋಮುವಾದಿ. ಕೇವಲ ಮುಸ್ಲಿಂ ಪರ ಮಾತ್ರ ಇರುವವರು. ಏನೋ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿಬಿಟ್ಟಿದ್ದಾರೆ. ಮೊದಲು ಸಿಎಂ ಕುಮಾರಸ್ವಾಮಿ ವಿರುದ್ಧ ಇದ್ದವರು ಇಂದು ಅಧಿಕಾರಕ್ಕಾಗಿ ಅವರನ್ನು ಹೊಗಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಕುಂದಗೋಳ ಕ್ಷೇತ್ರದಲ್ಲಿ ಮತದಾರರಿಗೆ ಬಿಜೆಪಿ ಪರ ಒಲವು ಇದೆ. ಪ್ರಧಾನಿ ನರೇಂದ್ರ ಮೋದಿ ಎರಡನೆ ಬಾರಿ ಪ್ರಧಾನಿಯಾಗಿ, ಮತ್ತೆ ಪ್ರಹ್ಲಾದ ಜೋಶಿ ಅವರು ಸಂಸದರಾಗುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಬಳಿಕ ಕಾಂಗ್ರೆಸ್ಸಿನವರು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಡಿಕೆಶಿ ಇಲ್ಲಿ ಅಭಿವೃದ್ಧಿಪರವಾಗಿ ಮತಯಾಚನೆ ಮಾಡುತ್ತಿಲ್ಲ. ಇಂದು ಇಲ್ಲಿಗೆ ಬಂದು ಬೂಟಾಟಿಕೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಣದ ಆಮಿಷವೊಡ್ಡಿ ಮತದಾರರನ್ನು ಒಲಿಸಲು ಪ್ರಯತ್ನಿಸುತ್ತಿದ್ದಾರೆ. ಒಂದೆಡೆ ಡಿಕೆಶಿ ಸಿಎಂ ಆಗಬೇಕು ಎಂದು ಕೋಟಿಗಟ್ಟೆಲೆ ಹಣವನ್ನು ಖರ್ಚು ಮಾಡಿದ್ದಾರೆ. ಇನ್ನೊಂದೆಡೆ ಚಿಂಚೊಳ್ಳಿಯಲ್ಲಿ ಸಚಿವ ಎಂ.ಬಿ ಪಾಟೀಲ್ ಕೂಡ ಸಿಎಂ ಸ್ಥಾನಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಿದ್ದಾರೆ ಎಂದು ಆರೋಪಿಸಿದರು.