ಮಂಡ್ಯ: ಜೆಡಿಎಸ್ ಭದ್ರಕೋಟೆ ಅಂದರೆ ಸಕ್ಕರೆ ನಾಡು ಮಂಡ್ಯ. (Mandya) ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Election) ಏಳಕ್ಕೆ ಏಳು ಕ್ಷೇತ್ರ ಗೆಲ್ಲಬೇಕು ಎಂದು ಈಗಾಗಲೇ ಅಭ್ಯರ್ಥಿಗಳ ಹೆಸರನ್ನೂ ಘೋಷಣೆ ಮಾಡಲಾಗಿದೆ. ಆದರೆ ಅದೊಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಘೋಷಣೆ ಮಾಡಿದ್ದೇ ಮುಳುವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಹೆಚ್.ಡಿ.ರೇವಣ್ಣ (HD Revanna) ನಡುವೆಯೇ ಪ್ರತಿಷ್ಠೆ ಫೈಟ್ ಸಾಕ್ಷಿಯಾಗಿದೆ. ತಮ್ಮ ಬೆಂಬಲಿಗನಿಗೆ ಕುಮಾರಸ್ವಾಮಿ ಟಿಕೆಟ್ ನೀಡಿರುವುದಕ್ಕೆ, ಅತ್ತ ರೇವಣ್ಣ ಆಪ್ತರು ಬಂಡಾಯ ಎದ್ದಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಣಕಹಳೆ ಮೊಳಗಿಸಿರುವ ಜೆಡಿಎಸ್, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ. ಆದರೆ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತ್ರ ದೇವೇಗೌಡರ ಪುತ್ರರಾದ ಕುಮಾರಸ್ವಾಮಿ ಹಾಗೂ ರೇವಣ್ಣ ನಡುವೆಯೇ ಪ್ರತಿಷ್ಠೆ ಶುರುವಾಗಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಟಿ.ಮಂಜು ಅವರನ್ನು ಜೆಡಿಎಸ್ (JDS) ಅಭ್ಯರ್ಥಿ ಅಂತ ಘೋಷಣೆ ಮಾಡಿರುವುದಕ್ಕೆ ರೇವಣ್ಣ ಅವರಿಗೆ ಅಸಮಾಧಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಬೆಂಬಲಿಗರು ಪಕ್ಷದ ನಿರ್ಧಾರದ ವಿರುದ್ಧ ರೆಬೆಲ್ ಆಗಿದ್ದು, ಬಂಡಾಯದ ಬಾವುಟ ಹಾರಿಸುವುದಕ್ಕೆ ಮುಂದಾಗಿದ್ದಾರೆ.
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಭಾವ ಹೆಚ್ಚಾಗಿದೆ. ಆದರೆ ಹಾಸನ ಜಿಲ್ಲೆಗೆ ಹೊಂದಿಕೊಂಡಿರುವ ಕೆ.ಆರ್.ಪೇಟೆಯಲ್ಲಿ ರೇವಣ್ಣರದ್ದೇ ಹೆಚ್ಚು ಪ್ರಭಾವವಿದೆ. ಕಳೆದ ಬೈ ಎಲೆಕ್ಷನ್ನಲ್ಲಿ ರೇವಣ್ಣ ಅವರು ತಮ್ಮ ಆಪ್ತ ಹಾಗೂ ಹಿರಿಯ ಮುಖಂಡ ಬಿ.ಎಲ್.ದೇವರಾಜು ಅವರಿಗೆ ಟಿಕೆಟ್ ಕೊಡಿಸಿದ್ದರು. ಆ ವೇಳೆ ಕುಮಾರಸ್ವಾಮಿ ಅವರು ಪ್ರಚಾರಕ್ಕಾಗಿಯೂ ಕ್ಷೇತ್ರಕ್ಕೆ ಬಾರದೇ ದೂರ ಉಳಿದಿದ್ದರು. ಆದರೂ ದೇವರಾಜು ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದರು. ಮತ್ತೆ ತಮಗೆ ಟಿಕೆಟ್ ಕೊಡಿಸುವಂತೆ ರೇವಣ್ಣ ಅವರ ಬಳಿ ದುಂಬಾಲು ಬಿದ್ದಿದ್ದರು. ಆದರೆ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗ ಹೆಚ್.ಟಿ.ಮಂಜು ಅವರನ್ನು ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ. ಇದು ರೇವಣ್ಣ ಅವರ ಬೇಸರಕ್ಕೆ ಕಾರಣವಾಗಿದೆ.
ಇನ್ನೂ ಪಕ್ಷದ ನಿರ್ಧಾರದ ವಿರುದ್ಧ ಬಿ.ಎಲ್.ದೇವರಾಜು ಹಾಗೂ ಟೀಮ್ ತಿರುಗಿ ಬಿದ್ದಿದ್ದು, ಬಂಡಾಯದ ಬಾವುಟ ಹಾರಿಸುವ ಸೂಚನೆ ನೀಡೋದಕ್ಕೆ ಶುರು ಮಾಡಿದ್ದಾರೆ. ಇದೇ ತಿಂಗಳು 18ರಂದು ಬೆಂಬಲಿಗರ ಸಭೆ ಕರೆದಿರುವ ದೇವರಾಜು, ಗ್ರಾಮ ಮಟ್ಟದಲ್ಲಿ ಮುಖಂಡರ ಮನೆಗಳಿಗೆ ತೆರಳಿ ಸಭೆಗೆ ಆಹ್ವಾನ ನೀಡುವ ಜೊತೆಗೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇನ್ನೊಂದೆಡೆ ಚುನಾವಣೆಗೆ ಸಿದ್ಧರಾಗುತ್ತಿರುವ ಹೆಚ್.ಟಿ.ಮಂಜು ಪ್ರತಿ ಸಮುದಾಯದ ಸಭೆ ನಡೆಸುವ ಮೂಲಕ ಸಂಘಟನೆ ಮಾಡುತ್ತಿದ್ದಾರೆ. ಬಿ.ಎಲ್.ದೇವರಾಜು ಅವರ ಅಸಮಾಧಾನದ ಬಗ್ಗೆ ಪ್ರಶ್ನೆ ಮಾಡಿದರೆ ಅವರು ಕೇಳುವುದರಲ್ಲಿ ಅರ್ಥ ಇದೆ. ಆದರೆ ಕಳೆದ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವೇಳೆಯೇ ನಮ್ಮ ವರಿಷ್ಠರು ಇದೇ ನಿಮಗೆ ಕೊನೆ ಬಾರಿ ಟಿಕೆಟ್ ಮುಂದೆ ಹೆಚ್.ಟಿ.ಮಂಜುಗೆ ನೀಡುತ್ತೇವೆ ಎಂದು ಹೇಳಿದ್ದರು. ಅದಕ್ಕೆ ದೇವರಾಜು ಅವರು ಸಹ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಹೀಗೆ ಮಾಡಿದರೆ ಏನು ಮಾಡಲು ಸಾಧ್ಯ, ಈಗಾಗಲೇ ಕುಮಾರಸ್ವಾಮಿ ಅವರು ಮೂರು ಬಾರಿ ಕರೆದು ಮಾತನಾಡಿದ್ದಾರೆ. ಆದರೆ ದೇವರಾಜು ಅವರು ಇನ್ನೂ ಒಪ್ಪಿಲ್ಲ, ಮುಂದೆ ಸರಿಹೋಗುತ್ತದೆ ಎಂದು ಎಚ್.ಟಿ.ಮಂಜು ಹೇಳಿದ್ದಾರೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್ನಿಂದ ವಾಹನ ಪಲ್ಟಿ – ಅಪಾರ ಪ್ರಮಾಣದ ಮದ್ಯ ನಾಶ
ಇನ್ನೊಂದೆಡೆ ನಿನ್ನೆಯಷ್ಟೇ ದೇವರಾಜು ಆಂಡ್ ಟೀ ಸಂಸದ ಸೂರಜ್ ರೇವಣ್ಣ ಅವರನ್ನು ಕರೆಸಿಕೊಂಡು ಅದ್ಧೂರಿಯಾಗಿ ಬರ್ತ್ ಡೇ ಆಚರಣೆ ಮಾಡಿ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ಇದು ನೋಡಿದರೆ ರೇವಣ್ಣ ಅವರು ದೇವರಾಜು ಪರವಾಗಿರುವುದು ಸ್ಪಷ್ಟವಾಗಿದ್ದು, ಪಟ್ಟು ಹಿಡಿದು ಕೊನೆ ಕ್ಷಣದಲ್ಲಿ ಟಿಕೆಟ್ ಬದಲಾವಣೆ ಮಾಡಿಸುತ್ತಾರಾ, ಅಥವಾ ಹೆಚ್.ಟಿ.ಮಂಜುವೇ ಅಭ್ಯರ್ಥಿಯಾಗಿ ಇರುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ಫುಲ್ ಆಕ್ಟೀವ್- ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k