ಮುಂಬೈ: 12 ದಿನಗಳ ಜೈಲುವಾಸದ ನಂತರ ಮತ್ತೆ ಶಾಸಕ ಪತಿ ರವಿ ರಾಣಾ ಮತ್ತು ಅಮರಾವತಿ ಸಂಸದೆ ನವನೀತ್ ರಾಣಾ ಒಂದಾಗಿದ್ದು, ಕಣ್ಣೀರಿಟ್ಟಿದ್ದಾರೆ.
ಗುರುವಾರ ನವನೀತ್ ರಾಣಾ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದು, ಆಕೆಯ ಪತಿ ರವಿ ರಾಣಾ ತಲೋಜಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ನವನೀತ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆ ರವಿ, ಆಸ್ಪತ್ರೆಗೆ ಮಡದಿಯನ್ನು ನೋಡಲು ಬಂದಿದ್ದಾರೆ. ಪತಿಯನ್ನು ನೋಡಿದ ತಕ್ಷಣ ನವನೀತ್ ಅಳಲು ಪ್ರಾರಂಭ ಮಾಡಿದ್ದಾರೆ. ದಂಪತಿ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು, ನಂತರ ರವಿ ಅವರು ಸಾಂತ್ವನ ಮಾಡಿದರು. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್
ನವನೀತ್ ರಾಣಾ ಅವರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಂಸದರು ಅಸ್ವಸ್ಥರಾಗಿದ್ದರು. ಅವರ ರಕ್ತದೊತ್ತಡ ಹೆಚ್ಚಾಗಿದೆ. ಅವರಿಗೆ ದೇಹದಲ್ಲಿ ನೋವು ಮತ್ತು ಸ್ಪಾಂಡಿಲೈಟಿಸ್ ಇತ್ತು. ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124(ಎ) (ದೇಶದ್ರೋಹ) ಮತ್ತು 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ರಾಣಾ ದಂಪತಿಯನ್ನು ಏಪ್ರಿಲ್ 23 ರಂದು ಖಾರ್ ಪೊಲೀಸರು ಬಂಧಿಸಿದ್ದರು.