ರಾಮನಗರ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಲೋಕೋಪೈಲೆಟ್ ಒಬ್ಬರು ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಘಟನೆ ರಾಮನಗರದ (Ramanagara) ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.
ನಿವೃತ್ತ ಲೋಕೋಪೈಲೆಟ್ ಶಿವಕುಮಾರ್ (71) ಬಂಧಿತ ಆರೋಪಿ. ರಾಮನಗರದ ಮಂಜುನಾಥ ಬಡಾವಣೆ ನಿವಾಸಿ ಶಿವಕುಮಾರ್, ನನಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗೊತ್ತು, ನಿಮ್ಮ ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಸಾವಿತ್ರಮ್ಮ ಹಾಗೂ ಶಿವಣ್ಣ ಎಂಬುವವರಿಂದ 15 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿದ್ದರು. ಇದನ್ನೂ ಓದಿ: ಚಿತ್ರದುರ್ಗ ವರ್ಷಿತಾ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್
ಬಳಿಕ ನಕಲಿ ಸೀಲು ಹಾಗೂ ಸೈನ್ ಬಳಸಿ ಹಣ ಕೊಟ್ಟವರಿಗೆ ಪತ್ರ ಬರೆದಿದ್ದ ಶಿವಕುಮಾರ್, ಇನ್ನೆರಡು ತಿಂಗಳಲ್ಲಿ ನೇಮಕಾತಿ ಪತ್ರ ಬರುತ್ತೆ ಎಂದು ಸುಳ್ಳು ಹೇಳಿದ್ದರು. ಎರಡು ತಿಂಗಳಾದರೂ ಯಾವುದೇ ನೇಮಕಾತಿ ಪತ್ರ ಬಾರದ ಹಿನ್ನೆಲೆ ಹಣ ಕೊಟ್ಟ ಸಾವಿತ್ರಮ್ಮ ಮತ್ತು ಶಿವಣ್ಣ ಅವರು ಶಿವಕುಮಾರ್ರನ್ನ ಸಂಪರ್ಕಿಸಲು ಮುಂದಾದಾಗ ಶಿವಕುಮಾರ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಯೂಟ್ಯೂಬರ್ ಸಮೀರ್ ಅರೆಸ್ಟ್ ಸಾಧ್ಯತೆ
ಈ ಬಗ್ಗೆ ವಿಚಾರಿಸಿದಾಗ ವಂಚನೆ ಆಗಿರೋದು ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಪೊಲೀಸರು, ಆರೋಪಿ ಶಿವಕುಮಾರ್ನನ್ನ ಬಂಧಿಸಿದ್ದಾರೆ.