ಉಡುಪಿ: ಮುಸುಕುಧಾರಿ ವ್ಯಕ್ತಿ ನಕಲಿ ನೋಟುಗಳನ್ನು ಎಸೆದು ಉಡುಪಿಯ ರೆಸಿಡೆನ್ಶಿಯಲ್ ಏರಿಯಾದಲ್ಲಿ ಪರಾರಿಯಾಗಿದ್ದಾನೆ. ಮನೆಯೊಳಗೆ ಲಾಕ್ ಆಗಿದ್ದ ಜನರಲ್ಲಿ ಇದು ಆತಂಕ ಮೂಡಿಸಿದೆ.
ದೇಶಕ್ಕೆ ಕೊರೊನಾ ಸೋಂಕು ಅಪ್ಪಳಿಸಿದ ಮೇಲೆ ಇಡೀ ಭಾರತಕ್ಕೆ ಭಾರತವೇ ಬೆಚ್ಚಿಬಿದ್ದಿದೆ. ಕಳೆದ ಇಪ್ಪತ್ತು ದಿವಸಗಳಿಂದ ಉಡುಪಿ ಸಂಪೂರ್ಣ ಲಾಕ್ ಡೌನ್ ಆಗಿತ್ತು. ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯ ಗಡಿಯಲ್ಲಿ ಡಬಲ್ ಲಾಕ್ ಡೌನ್ ವಿಧಿಸಲಾಗಿತ್ತು .
ಉಡುಪಿ ನಗರದ ವಾದಿರಾಜ ರಸ್ತೆಯಲ್ಲಿ ಇಂದು ಕಿಡಿಗೇಡಿ ನೋಟ್ ಎಸೆದು ಹೋಗುತ್ತಿದ್ದಂತೆ ಇದು ಕೊರೊನಾ ಹರಡಿಸುವ ದುಷ್ಕೃತ್ಯ ಅಂತ ಪೊಲೀಸರಿಗೆ ದೂರು ನೀಡಲಾಗಿದೆ. ಸುತ್ತಮುತ್ತ ಸಾವಿರಾರು ಮನೆಗಳಿದ್ದು ಜನ ಆತಂಕದಿಂದ ಹೊರಬರುವಂತಾಯಿತು. ಕ್ಷಣ ಮಾತ್ರದಲ್ಲಿ ಈ ವಿಚಾರ ಇಡೀ ಏರಿಯಾಗೆ ಪಸರಿಸಿತು. ವಾಟ್ಸಪ್ ಗ್ರೂಪ್ ಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.
ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು ಸುತ್ತಮುತ್ತ ಇರುವ ಕಮರ್ಷಿಯಲ್ ಕಾಂಪ್ಲೆಕ್ಸ್, ಮನೆಯ ಮುಂಭಾಗದ ಸಿಸಿಟಿವಿಯ ದೃಶ್ಯಾವಳಿಗಳನ್ನು ಜಾಲಾಡಿದರು. ಒಂದು ಮನೆಯ ಸಿಸಿಟಿವಿಯಲ್ಲಿ ನೋಟು ಎಸೆದ ದುಷ್ಕರ್ಮಿಯ ಚಹರೆ ಪತ್ತೆಯಾಗಿದೆ. ಸಿಸಿಟಿವಿ ವಿಡಿಯೋ ಸಿಕ್ಕಿದ್ದು, ಪೊಲೀಸರು ಆತನ ಜಾಡು ಹಿಡಿದಿದ್ದಾರೆ.
ಸ್ಥಳೀಯ ಗೃಹಿಣಿ ಸ್ವರ್ಣ ಪೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವೆಲ್ಲಾ ಮನೆಯ ಒಳಗೆ ಕುಟುಂಬ ಸಮೇತರಾಗಿ ಇದ್ದೆವು. ಈ ಸಂದರ್ಭ ಯಾರೋ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೇಪರ್ ನೋಟುಗಳನ್ನು ಎಸೆದು ಹೋಗಿದ್ದಾನೆ. ಅದರಲ್ಲಿ ಕೊರೊನಾ ಸೋಂಕು ಇದೆ ಎಂಬ ಬಗ್ಗೆ ಮಾಹಿತಿ ಬಂತು. ಹೊರಗೆ ಬಂದು ನೋಡುವಾಗ ಸುತ್ತಮುತ್ತಲಿನ ಕೆಲವರೆಲ್ಲ ಜಮಾಯಿಸಿದ್ದರು. ಸ್ವಲ್ಪ ಹೊತ್ತು ಬಿಟ್ಟು ಪೊಲೀಸರು ಕೂಡ ಬಂದರು ಎಂದು ಹೇಳಿದರು.