ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾದಲ್ಲಿ ಸಿಲುಕಿದ್ದ ಕಾಫಿನಾಡಿನ ಯುವಕನ ರಕ್ಷಣೆ

Public TV
2 Min Read
CKM YOTH RESCUED IN CAMBODIA

ಚಿಕ್ಕಮಗಳೂರು: ವಿದೇಶದಲ್ಲಿ (Foreign) ಉದ್ಯೋಗದ (Job) ಆಸೆಗೆ ಬಿದ್ದು ಕಾಂಬೋಡಿಯಾ (Cambodia) ದೇಶಕ್ಕೆ ಕೆಲಸಕ್ಕೆ ತೆರಳಿದ್ದ ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾಗುಂಡಿ ಯುವಕ ಅಶೋಕ್‌ನನ್ನು ಭಾರತೀಯ ರಾಯಭಾರಿ ಕಚೇರಿಯ (Indian Embassy) ಸಿಬ್ಬಂದಿ ರಕ್ಷಿಸಿದ್ದು, ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಆರಂಭವಾಗಿದೆ.

ಚೀನಿ ಆಫ್ ಮಾಫಿಯಾಕ್ಕೆ ಸಿಲುಕಿದ್ದ ಯುವಕ ಕಳೆದ ಮೂರು ತಿಂಗಳ ಹಿಂದೆ ಕಾಂಬೋಡಿಯಾ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ. ವಂಚನೆಯ ಟಾರ್ಗೆಟ್ ನೀಡುತ್ತಿದ್ದ ಚೀನಿ ಆಪ್ ಕಂಪನಿ ಟಾರ್ಗೆಟ್ ಪೂರ್ಣ ಮಾಡದ ಹಿನ್ನೆಲೆ ಅಶೋಕ್‌ಗೆ ಚಿತ್ರಹಿಂಸೆ ನೀಡಿತ್ತು. ಇನ್ನು ಅಶೋಕ್‌ನನ್ನು ಬಂಧನದಲ್ಲಿರಿಸಿ 13 ಲಕ್ಷ ರೂ. ಹಣಕ್ಕಾಗಿ ಆತನ ಪೋಷಕರಿಗೆ ಬೇಡಿಕೆ ಇಟ್ಟಿದ್ದರು. ಅಶೋಕ್‌ನನ್ನು ಭಾರತಕ್ಕೆ ವಾಪಸ್ ಕರೆತರುವಂತೆ ಆಶೋಕ್ ಕುಟುಂಬಸ್ಥರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಹೂಡಿಕೆ ಮಾಡಿದ್ರೆ ಡಬಲ್ ಕೊಡೋದಾಗಿ ನಂಬಿಸಿ ಹಣದೊಂದಿಗೆ ದಂಪತಿ ಎಸ್ಕೇಪ್

ಈ ಕುರಿತು ಮಾಹಿತಿ ತಿಳಿದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸ್ಪಂದಿಸಿ ಅಶೋಕ್‌ನನ್ನು ರಕ್ಷಣೆ ಮಾಡುವಂತೆ ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ಮನವಿ ಮಾಡಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಕಾಂಬೋಡಿಯಾದ ವಿಯೆಟ್ನಾಂ ಗಡಿಭಾಗದಲ್ಲಿರುವ ಚೀನಿ ಆಪ್ ಕಚೇರಿಗೆ ಭೇಟಿ ನೀಡಿ, ಅಶೋಕ್‌ನನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಮತ್ತೆ ಮಳೆ ಅವಾಂತರ – ಸಾಧಾರಣ ಮಳೆಗೆ ಕೆರೆಯಂತಾದ ಸರ್ವಿಸ್ ರಸ್ತೆ

ಸದ್ಯ ಅಶೋಕ್ ಕಾಂಬೋಡಿಯಾದ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿ ಜೊತೆಯಿದ್ದು, ಸೋಮವಾರದ ಬಳಿಕ ಅಶೋಕನನ್ನು ಭಾರತಕ್ಕೆ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ. ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಗ್ರಾಮದ ಯುವಕ ಅಶೋಕ್ ಕಾಂಬೋಡಿಯಾ ದೇಶದಲ್ಲಿ ಚೀನಿ ಆಪ್ ಮಾಫಿಯಾಕ್ಕೆ ಸಿಲುಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕೊಪ್ಪ ಡಿವೈಎಸ್ಪಿ, ನರಸಿಂಹರಾಜಪುರ, ಬಾಳೆಹೊನ್ನೂರು ಪಿಎಸ್‌ಐಗಳು ಅವರ ಕುಟುಂಬಸ್ಥರ ಜೊತೆ ನಿಕಟ ಸಂಪರ್ಕ ಹೊಂದಿ, ನಿಕ್ಷೇಪ್ ಎಂಬ ಯುವಕನ ಜೊತೆ ಸಂಪರ್ಕ ಸಾಧಿಸಿ, ಅಶೋಕ್‌ನನ್ನು ಭಾರತೀಯ ರಾಯಭಾರಿ ಕಚೇರಿಗೆ ಕರೆತಂದು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

ಈ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಬೇರೆ-ಬೇರೆ ಗಣ್ಯರು ಕೂಡ ವಿದೇಶಿ ರಾಯಭಾರಿಗಳೊಂದಿಗೆ ಪತ್ರ ವ್ಯವಹಾರ, ಮಾತಕತೆ ನಡೆಸುವ ಮೂಲಕ ಅಶೋಕ್‌ಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಪ್ರಕರಣ ಸುಖಾಂತ್ಯ ಕಾಣುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಅಶೋಕ್ ಇಲ್ಲಿಗೆ ಬಂದ ನಂತರ ಮಾಹಿತಿ ಪಡೆದು, ಇಲ್ಲಿ ಯಾರಾದರೂ ಆ ರೀತಿ ಕೆಲಸ ಕೊಡಿಸುವ ಆಸೆ ತೋರಿಸಿ ವಂಚಿಸಿದ್ದಾರಾ ಎಂಬ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ವಿಕ್ರಂ ಅಮಟೆ ತಿಳಿಸಿದ್ದಾರೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

Share This Article