ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರಾಸಕ್ತಿ ಮತ್ತೆ ಎದ್ದು ಕಾಣುತ್ತಿದೆ. ಇಂದು ಪಾಲಿಕೆಯ ಆವರಣದಲ್ಲಿ ನಡೆದ ಗಣರಾಜೊತ್ಸವ ಆಚರಣೆಗೆ ಪಾಲಿಕೆಯ ಅಧಿಕಾರಿಗಳು ಭಾಗಿಯಾಗದೇ ನಿರಾಸಕ್ತಿ ತೋರಿಸಿದ್ದಾರೆ.
ಪ್ರತಿ ವರ್ಷದ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗಿಯಾಗದೇ ಪಾಲಿಕೆ ಅಧಿಕಾರಿಗಳು ನಾಪತ್ತೆಯಾಗುತ್ತಾರೆ. ಇದು ಸರಿಯಾದ ಕ್ರಮವಲ್ಲ. ಎಲ್ಲರೂ ಭಾಗಿಯಾಗಬೇಕು ಎಂದು ಮೇಯರ್, ಕಮಿಷನರ್ ಸೂಚಿಸಿದರೂ ಡೊಂಟ್ ಕೇರ್ ಎಂದಿದ್ದಾರೆ.
ಇಂದು ಪಾಲಿಕೆಯ ಆವರಣದಲ್ಲಿ ನಡೆದ ಧ್ವಜಾರೋಹಣದಲ್ಲಿ ಬಹುತೇಕ ಪಾಲಿಕೆ ಅಧಿಕಾರಿಗಳು ಗೈರಾಗಿದ್ದರು. ಇದನ್ನ ಕಂಡ ಮೇಯರ್ ಗೌತಮ್ ಕುಮಾರ್ ಗೈರಾದ ಅಧಿಕಾರಿಗಳ ವಿರುದ್ಧ ಗರಂ ಆದರು. ಗೈರಾದ ಅಧಿಕಾರಿಗಳ ಒಂದು ದಿನದ ವೇತನ ಕಡಿತಗೊಳಿಸಲು ನಿರ್ಧಾರ ಮಾಡಿದ್ದಾರೆ. ಶನಿವಾರ ಮೇಯರ್ ಗೌತಮ್ ಕುಮಾರ್ ಎಲ್ಲಾ ಪಾಲಿಕೆ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಆಚರಣೆಗೆ ಬರುವಂತೆ ಸೂಚನೆಯನ್ನ ನೀಡಿದ್ದರು.
ಮೇಯರ್ ಮಾತಿಗೆ ಸೊಪ್ಪು ಹಾಕದ ಪಾಲಿಕೆ ಅಧಿಕಾರಿಗಳು ಬೆಚ್ಚಗೆ ಮನೆಯಲ್ಲೇ ಮಲಗಿದ್ದಾರೆ. ಇನ್ನೂ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನೀಲ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಇದೊಂದು ರೀತಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿ. ಎಲ್ಲರೂ ಹಾಜರಾಗುವಂತೆ ಸೂಚಿಸಿದ್ದರೂ ಹಾಜರಾಗಿಲ್ಲ. ಗೈರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.