ಬೆಂಗಳೂರು: ಮಲ್ಟಿಪ್ಲೆಕ್ಸ್ ಮತ್ತು ಚಿತ್ರ ಮಂದಿರಗಳಲ್ಲಿ ಎಳನೀರು ಮಾರಾಟ ಸಂಬಂಧ ಇಂದು ವಿಧಾನ ಪರಿಷತ್ನಲ್ಲಿ ಚರ್ಚೆ ನಡೆಯಿತು.
ರೈತರ ಪರ ಸರ್ಕಾರ ಅಂತ ನೀವು ಹೇಳುತ್ತಿದ್ದೀರಿ. ಆದರೆ ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ತಮಿಳುನಾಡು ಮಾದರಿಯಂತೆ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಎಳನೀರನ್ನು ಮಾರಾಟ ಮಾಡಲು ಸರ್ಕಾರ ಯಾಕೆ ಆದೇಶ ನೀಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಖಂಡ್ರೆ, ಕೂಲ್ ಡಿಂಕ್ಸ್ ಮಾರಾಟವನ್ನು ರದ್ದು ಮಾಡಿ ಎಳನೀರನ್ನು ಕಡ್ಡಾಯವಾಗಿ ಮಾರುವಂತೆ ಆದೇಶ ಹೊರಡಿಸಲು ಸಾಧ್ಯವಿಲ್ಲ. ಮಲ್ಟಿಪ್ಲೆಕ್ಸ್ ಹಾಗೂ ಚಲನ ಚಿತ್ರ ಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್, ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆ ಅನುಮತಿ ನೀಡಲಾಗುತ್ತಿದೆ. ಕರ್ನಾಟಕ ಮಹಾನಗರ ಪಾಲಿಕೆ ಗಳ ಅಧಿನಿಯಮ ಪ್ರಕಾರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೂಲ್ ಡ್ರಿಂಕ್ಸ್ ರದ್ದು ಮಾಡುವ ಆದೇಶ ಮಾಡಲು ನಿಯಮದಲ್ಲಿ ಅವಕಾಶ ಇಲ್ಲ. ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅರ್ಹ ಪದಾರ್ಥಗಳ ಜೊತೆಗೆ ಎಳನೀರು ಮಾರಾಟ ಮಾಡಲು ಬೇಡಿಕೆ ಬಂದ್ರೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ನಿಷೇಧವಾಗಿದ್ದು ಯಾಕೆ?
ಜಲ್ಲಿಕಟ್ಟಿಗೆ ಆಗ್ರಹಿಸಿ ಪೇಟಾ ನಡೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ನದಿ ನೀರನ್ನು ಬಳಸಿಕೊಂಡು ಲಾಭ ಮಾಡುತ್ತಿವೆ. ಹೀಗಾಗಿ ವಿದೇಶಿ ಕಂಪೆನಿಗಳ ಪಾನೀಯಗಳನ್ನು ನಿಷೇಧಿಸಬೇಕೆಂಬೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ವ್ಯಾಪಾರಿ ಸಂಘ ಮಾರ್ಚ್ ಒಂದರಿಂದ ವಿದೇಶಿ ತಂಪು ಪಾನೀಯವನ್ನು ಮಾರಾಟ ಮಾಡದೇ ಇರುವ ನಿರ್ಧಾರವನ್ನು ಕೈಗೊಂಡಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಮಂದಿಗೆ ನಿನ್ನೆ ಸಿಹಿ, ಇಂದು ಕಹಿ ಸುದ್ದಿ: ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ ಕಡಿಮೆಯಾಗಿದ್ದು ಯಾಕೆ?