ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದೇ ಸಮಯದಲ್ಲಿ ಕೆಲ ಸಚಿವರು ಸೇರಿ ಪ್ರಭಾವಿ ರಾಜಕಾರಣಿಗಳು ಪಕ್ಷ ಬೇಧ ಮರೆತು ದರ್ಶನ್ (Darshan) ಪರವಾಗಿ ತನಿಖಾಧಿಕಾರಿಗಳಿಗೆ (Investigation Officer) ಫೋನ್ ಮೇಲೆ ಫೋನ್ ಮಾಡುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕುಡಿದ ಮತ್ತಿನಲ್ಲಿ ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ. ಅವನ ಕೆರಿಯರ್ ಹಾಳಾಗಿ ಹೋಗುತ್ತೆ. ಏನಾದರೂ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಯಾರ ಒತ್ತಡಕ್ಕೂ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ (DCP Girish) ಅಂಡ್ ಟೀಂ ತಲೆಬಾಗಿಲ್ಲ. ಇದನ್ನೂ ಓದಿ: ನ್ಯಾಯವು ಮೇಲುಗೈ ಸಾಧಿಸಲಿ- ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ದರ್ಶನ್ ಪತ್ನಿ ಪ್ರತಿಕ್ರಿಯೆ
ಯಾವುದೇ ಒತ್ತಡಕ್ಕೆ ಒಳಗಾಗಬೇಡಿ, ನಿಮ್ಮ ಕೆಲಸ ನೀವು ಮಾಡಿ ಎಂದು ಪೊಲೀಸ್ ಆಯುಕ್ತರು ಕೂಡ ತಿಳಿಸಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಇಂತಹ ನಟರಿಗೆ ಬುದ್ದಿ ಕಲಿಸಬೇಕು ಎಂದು ಹಠಕ್ಕೆ ಬಿದ್ದು ತನಿಖಾ ತಂಡ ಕೆಲಸ ಮಾಡುತ್ತಿದೆ. ಡಿಸಿಪಿ ಗಿರೀಶ್ ಟೀಂ ವೈಖರಿಗೆ ಇಲಾಖೆಯ ಪಡಸಾಲೆಯಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆರೋಪಿ ಪ್ರದೂಷ್ ಬಿಜೆಪಿಗರ ಜೊತೆ ನೇರ ಸಂಬಂಧ ಹೊಂದಿದ್ದಾರೆ. ಅವರು ಒತ್ತಡ ಹೇರಲು ನೋಡಿದ್ದಾರೆ. ಆದರೆ ಇದಕ್ಕೆ ಪೊಲೀಸರು ಮಣಿದಿಲ್ಲ. ಈ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಶಾಸಕ ಪೊನ್ನಣ್ಣ ಆರೋಪಿಸಿದ್ದಾರೆ.
ಈ ಮಧ್ಯೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿ ತಿರುಚಲು ವೈದ್ಯಾಧಿಕಾರಿಗಳಿಗೆ ದರ್ಶನ್ ಕಡೆಯವರು ಹಣದ ಆಮಿಷ ಒಡ್ಡಲು ಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ಇಂಥಾದ್ದು ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.