-ದಿನೇಶ್ ಗುಂಡೂರಾವ್ ರಾಜಕೀಯದಲ್ಲಿ ಬಚ್ಚಾ
ದಾವಣಗೆರೆ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಭಸ್ಮಾಸುರ ಇದ್ದಂಗೆ, ಅವರು ಎಲ್ಲರ ತಲೆ ಮೇಲೆ ಕೈ ಇಡಲು ಹೊರಟಿದ್ದಾರೆ. ಈ ಮೂಲಕ ಕಾಂಗ್ರೆಸ್ಸನ್ನು ಸರ್ವನಾಶ ಮಾಡುತ್ತಾರೆ, ಕೊನೆಗೆ ತಾವು ನಾಶವಾಗುತ್ತಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ರೇಣುಕಾಚಾರ್ಯ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಕೈ ಕೊಟ್ರು ಅಂತಾರೆ. ಹೋಗಿ ಹೋಗಿ ರಾಕ್ಷಸರ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಉದ್ದಾರವಾಗಲ್ಲ. ರಾಜ್ಯದಲ್ಲಿ ಒಂದು ಸ್ಥಾನವನ್ನು ಕೂಡ ಜೆಡಿಎಸ್ ಗೆಲ್ಲೋಲ್ಲ. ತಾತ, ಮೊಮ್ಮಕ್ಕಳು ಹೀನಾಯವಾಗಿ ಸೋಲುತ್ತಾರೆ ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ಬಿಎಸ್ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ
ಬಿಎಸ್ವೈ ಡೈರಿ ವಿಚಾರವಾಗಿ ಪ್ರತಿಕ್ರಿಯಿಸಿ, ದಿನೇಶ್ ಗುಂಡೂರಾವ್ ರಾಜಕೀಯದಲ್ಲಿ ಬಚ್ಚಾ. ಬಿಎಸ್ವೈ ಅವರ ವಯಸ್ಸಿಗಾದರೂ ಮರ್ಯಾದೆ ನೀಡಬೇಕು. ಯಡಿಯೂರಪ್ಪನವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದೀರಾ. ಇನ್ನಾದರೂ ಯಡಿಯೂರಪ್ಪನವರ ಬಗ್ಗೆ ಗೌರವದಿಂದ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ನಾನು ಕೋಟಿನೇ ನೋಡಿಲ್ಲ. ಬರೀ ಲಕ್ಷ ನೋಡಿದ್ದೇನೆ. ಬಹುಕೋಟಿ ಹಗರಣ ಮಾಡಿದವರಿಗೆ ಕೋಟಿ ಬೆಲೆ ಗೊತ್ತಿಲ್ವಾ? ಹೈ ಕಮಾಂಡ್ಗೆ ಕಪ್ಪ ಕೊಡೋದು ಕಾಂಗ್ರೆಸ್ ಸಂಸ್ಕೃತಿ, ನಮ್ಮದಲ್ಲಾ. ಚುನಾವಣೆ ವೇಳೆಯಲ್ಲಿ ಈ ಪ್ರಕರಣ ತೆಗೆದು ಕಾಂಗ್ರೆಸ್ ಜನರ ಕಿವಿಗೆ ಹೂವು ಇಡುತ್ತಿದ್ದಾರೆ. ಇದನ್ನು ಜನರು ನಂಬೋದಿಲ್ಲ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.