ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ (Udho Udho Shri Renuka Yallamma) ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇದೀಗ ‘ಸಮಯದ ಕುದುರೆಯನ್ನೇರಿ ಉರುಳಿವೆ ಋತುಗಳು’ – ಇನ್ಮುಂದೆ ಹೊಸ ಅಧ್ಯಾಯದೊಂದಿಗೆ ಧಾರಾವಾಹಿಯಲ್ಲಿ ಅನೇಕ ರೋಚಕ ತಿರುವುಗಳು ಕಾಣಿಸಿಕೊಳ್ಳಲಿದೆ.
ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ರೇಣುಕೆ ಹಾಗು ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಅಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದರು ಆದರೆ ಇದೀಗ ಕಥೆಯಲ್ಲಿ ವರ್ಷಗಳುರುಳಿ ರೇಣುಕಾ-ಯಲ್ಲಮ್ಮ ಬಾಲ್ಯದಿಂದ ತಾರುಣ್ಯದ ಕಡೆಗೆ ಕಾಲಿಡುತ್ತಿದ್ದಾರೆ.
ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ ? ದುಷ್ಟರಿಂದ ಇನ್ನೆಷ್ಟು ಕಷ್ಟಗಳನ್ನು ಎದುರಿಸಬೇಕಾಗಬಹುದು? ಇವರಿಬ್ಬರ ಬಾಳಿನಲ್ಲಿ ಪ್ರೀತಿಯ ಹೂವು ಅರಳಲಿದೆಯೇ ? ಜನಜನಿತವಾದ ರೇಣುಕಾ ಹಾಗು ಜಮದಗ್ನಿಯ ವಿವಾಹವು ಯಾವಾಗ ಜರುಗಲಿದೆ ? ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ದೇವಿ ಅಂಶದ ಎರಡು ಶಕ್ತಿಗಳು ಒಂದಾಗಿ ಮುಂಬರುವ ಕಷ್ಟ ಕೋಟಲೆಗಳನ್ನು ಹೇಗೆ ಎದುರಿಸುತ್ತಾರೆ ? ಎಂಬುದು ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.
ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ಮಹತಿ (Mahathi), ಯಲ್ಲಮ್ಮನ ಪಾತ್ರದಲ್ಲಿ ಅನನ್ಯ ಮೈಸೂರ್ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್ ಮತ್ತು ಗ್ರಾಫಿಕ್ಸ್ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹೊಸ ಸವಾಲುಗಳನ್ನು ಎದುರಿಸಲು, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಇದೇ ಸೋಮವಾರದಿಂದ ರಾತ್ರಿ 8.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.