ಬೆಂಗಳೂರು: ಚಿತ್ರಮಂದಿರಗಳು ಭರ್ತಿಯಾಗುತ್ತಿರುವ ಇಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಚಿತ್ರಗಳನ್ನು ನೀಡುವುದೂ ನಮ್ಮ ಜವಾಬ್ದಾರಿ ಎನ್ನುವುದನ್ನು ಸಾದರಪಡಿಸುವ ಸಲುವಾಗಿ ಸದ್ಯದಲ್ಲೇ ತೆರೆಕಾಣಲಿರುವ ಅಪೂರ್ವ ಚಿತ್ರ ‘ಸರ್ವಸ್ವ’
ಹೌದು, ಚಿತ್ರರಂಗಕ್ಕಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡಾದರೂ ಕಲಾಲೋಕಕ್ಕೆ ತಮ್ಮನ್ನು ತೆರೆದುಕೊಳ್ಳಬೇಕೆಂಬ ಹಲವರ ಆಸೆ ನಿರಾಸೆಯಾಗುವುದು ಕಾಲಮಹಾತ್ಮೆ. ಆದರೆ ತಮ್ಮ ಸರ್ವಸ್ವವನ್ನೂ ” ಸರ್ವಸ್ವ” ಚಿತ್ರಕ್ಕಾಗಿಯೇ ಮೀಸಲಿಟ್ಟು ಶ್ರಮವಹಿಸಿ ಕಾರ್ಯನಿರ್ವಹಿಸಿರುವುದರ ಫಲ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ” ಸರ್ವಸ್ವ” ಚಿತ್ರ ಎನ್ನುತ್ತಾರೆ ಚಿತ್ರತಂಡದವರು.
ಬಹಳಷ್ಟು ಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯಿಂದ ಖ್ಯಾತರಾಗಿದ್ದ ತಿಲಕ್ ರವರು ಈ ಚಿತ್ರದ ನಾಯಕನಟ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಟೋಟಲ್ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಇದಾಗಿದ್ದು ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಶ್ರೇಯಸ್ ಕಬಾಡಿಯವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ನಾಲ್ಕು ಮುಖ್ಯಪಾತ್ರಗಳ ಸುತ್ತ ತಿರುಗುವ ಕಥಾಹಂದರವುಳ್ಳ ಚಿತ್ರದಲ್ಲಿ ತಿಲಕ್ ಸಿನಿಮಾ ನಿರ್ದೇಶಕನ ಪಾತ್ರ ನಿರ್ವಹಿಸಲಿದ್ದಾರೆ. ಟ್ರೇಲರ್ ನಲ್ಲಿ ನಾಯಕ ನಟ ಫ್ರೆಂಡ್ ಶಿಫ್ ಮತ್ತು ಪ್ರೀತಿ ನಡುವೆ ಸಿಲುಕಿಕೊಳ್ಳುತ್ತಾನೆ. ಪ್ರೀತಿ, ಗೆಳತನ ನಡುವೆ ತನ್ನ ಜೀವನಕ್ಕೆ ಯಾವುದು ಮುಖ್ಯ ಎಂಬುದರ ಗೊಂದಲದಲ್ಲಿ ಬೀಳುತ್ತಾನೆ. ಈ ಎಲ್ಲ ಗೊಂದಲಗಳಿಂದ ನಾಯಕ ನಟ ಹೇಗೆ ಬರುತ್ತಾನೆಂಬುದನ್ನು ತಿಳಿಯಲು ಸಿನಿಮಾ ನೋಡಲೇಬೇಕು.
ಭೂಪಿಂದರ್ಪಾಲ್ ಸಿಂಗ್ ರೈನಾ ಛಾಯಾಗ್ರಹಣ ಮಾಡಿರುವ ಚಿತ್ರಕ್ಕೆ ಕವಿರಾಜ್, ಜಯಂತ್ ಕಾಯ್ಕಿಣಿ ಮುಂತಾದ ದಿಗ್ಗಜರ ಸಾಹಿತ್ಯದ ಸಾಥ್ ಬೋನಸ್ ಆಗಲಿದೆ. ವಿಮಲ್ ಮತ್ತು ವಾಮ್ದೇವ್ ನಿರ್ಮಾಪಕರಾಗಿರುವ ಈ ಚಿತ್ರ ಶೀಘ್ರದಲ್ಲೇ ಬೆಳ್ಳಿತೆರೆಗೆ ಬರಲಿದ್ದು ಚಿತ್ರಾಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.
ಸಿನಿಮಾ ಸುಂದರ ತಾಣಗಳಲ್ಲಿ ಮೂಡಿಬಂದಿದ್ದು, ಕೆಲವು ಸ್ಥಳಗಳ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.