ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಂದ್ – ಪ್ರಾಧಿಕಾರದ ವಿರುದ್ಧ ರೈತರ ಆಕ್ರೋಶ

Public TV
1 Min Read
MND KRS

ಮಂಡ್ಯ: ಕಳೆದ 15 ದಿನಗಳಿಂದ ನಾಲೆಗೆ ನೀರು ಬಿಡುಗಡೆ ಮಾಡುತ್ತಿದ್ದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಏಕಾಏಕಿ ನಾಲೆಗೆ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಿದೆ. ಪ್ರಾಧಿಕಾರ ಈ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲೆಗೆ ನೀರು ನಿಲ್ಲಿಸಿರುವುದನ್ನು ಖಂಡಿಸಿ ನದಿ ನೀರಿನಲ್ಲಿ ಇಳಿದು ಪ್ರತಿಭಟನೆ ನಡೆಸಿದ ರೈತರು, ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕಳೆದ 15 ದಿನದಿಂದ ನಾಲೆಗಳಿಗೆ ನೀರು ಬಿಡಲಾಗುತಿತ್ತು. ಇಂದು ಬೆಳಗ್ಗೆ ನಾಲೆಗಳ ಮೂಲಕ 2,911 ಕ್ಯೂಸೆಕ್ ನೀರನ್ನು ರೈತರ ಬೆಳೆಗೆ ಹರಿಸಲಾಗಿತ್ತು. ಆದರೆ ಇಂದು ಸಂಜೆಯಿಂದ ಏಕಾಏಕಿ ನೀರು ಬಿಡುವುದನ್ನ ಸ್ಥಗಿತಗೊಳಿಸಲಾಗಿದೆ. ಆದರೆ ತಮಿಳುನಾಡಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ಈ ಮೂಲಕ ಕಾವೇರಿ ನದಿ ನೀರು ಪ್ರಾಧಿಕಾರದಿಂದ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

mnd krs water 2

ಮೊದಲು ಮಂಡ್ಯ ರೈತರ ಹಿತಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಮುಂದಾಗಬೇಕೆಂದು ಒತ್ತಾಯ ಮಾಡಿದ ರೈತರು, ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ಸದ್ಯ ನಾಲೆಗಳಿಗೆ ಕೇವಲ 50 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಆದರೆ ಕೆಆರ್ ಅಣೆಕಟ್ಟಿನಿಂದ ಹೊರ ಹರಿವಿನಲ್ಲಿ 6080 ಕ್ಯೂಸೆಕ್ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೂಡಲೇ ನಾಲೆಗೆ ನೀರು ಬಿಟ್ಟು, ರೈತರಿಗೆ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಸೂಕ್ತ ಸೂಚನೆ ನೀಡಬೇಕು. ಈಗ ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ನೀಡು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಅಣೆಕಟ್ಟೆ ಗರಿಷ್ಠ ಮಟ್ಟ 124.80 ಅಡಿ ಇದ್ದು ಇಂದು 83.60 ಅಡಿ ನೀರು ಸಂಗ್ರಹಗೊಂಡಿದೆ. 5,661 ಕ್ಯೂಸೆಕ್ ಒಳ ಹರಿವು ಇದ್ದರೆ 6130 ಕ್ಯೂಸೆಕ್ ಹೊರ ಹರಿವು ಇದೆ.

Share This Article
Leave a Comment

Leave a Reply

Your email address will not be published. Required fields are marked *