ಮೈಸೂರು: ಮೈಸೂರು ಭಾಗದ ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಬಗೆ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪರೋಕ್ಷವಾಗಿ ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಸರ್ಕಾರದಲ್ಲಿ ಅಸಮಾಧಾನ ಎದ್ದಿದ್ದು, ಮೈಸೂರಿನಲ್ಲಿಯು ಸಹ ಹಬ್ಬಿದೆ. ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ಅಪವಿತ್ರ ಸರಕಾರದ ಅರ್ಧ ಸಚಿವ ಸಂಪುಟ ಅಂತೂ ರಚನೆಯಾಗಿದೆ. ಮೈಸೂರು ಭಾಗಕ್ಕೆ ಒಂದೇ ಒಂದು ಸಚಿವ ಸ್ಥಾನ ಕೊಟ್ಟಿಲ್ಲ. ಈ ಭಾಗದಲ್ಲಿರುವ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿ ಕೊಡಲು ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿರಬಹುದು. ನಾಡಹಬ್ಬದ ಹೊಸ್ತಿಲಲ್ಲಿದೆ. ಆದರೂ ಸಹ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿಕೊಡಲು ಸಿಎಂ ಈ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ಸಾರಾ ಮಹೇಶ್ ಭವಿಷ್ಯ ನುಡಿದರು.
ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ರೀತಿ ಆಪರೇಷನ್ ಕಮಲಕ್ಕೆ ಬಳಕೆಯಾದ ಹಣದ ಬಗ್ಗೆಯೂ ಸಹ ತನಿಖೆ ಆಗಲಿ. ಫೋನ್ ಕದ್ದಾಲಿಕೆ ಪ್ರಕರಣದಿಂದ ಜೆಡಿಎಸ್ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ ಎಂದು ಕಿಡಿಕಾರಿದ್ದಾರೆ.