– ಬಸ್ ನ ಡೀಸೆಲ್ ಟ್ಯಾಂಕ್ ಗಿಲ್ಲ ಕ್ಯಾಪ್
ಕಲಬುರಗಿ: ಈಶಾನ್ಯ ಸಾರಿಗೆಯ ಬಸ್ ಗಳಲ್ಲಿ ಸಂಚರಿಸಬೇಕು ಅಂದ್ರೆ ನಿಮ್ಮ ಜೀವ ಕೈಯಲ್ಲಿ ಹಿಡಿದು ಕೂರಬೇಕು. ಯಾಕಂದ್ರೆ ಅಲ್ಲಿನ ಬಹುತೇಕ ಬಸ್ನ ಡಿಸೇಲ್ ಟ್ಯಾಂಕ್ ಗಳು ಯಾವಾಗ ಬ್ಲಾಸ್ಟ್ ಆದರೂ ಅಚ್ಚರಿಯಿಲ್ಲ.
ಹೌದು. ಈಶಾನ್ಯ ಸಾರಿಗೆ ಸಂಸ್ಥೆಗೆ ಇತ್ತೀಚೆಗೆ ಮಲೇಶ್ಯಾದಲ್ಲಿ ರಾಷ್ಟ್ರಮಟ್ಟದ ಇಂಡಿಯಾ ಬಸ್ ಸೇಫ್ಟಿ ಅವಾರ್ಡ್ ಸಿಕ್ಕಿತ್ತು. ಆದ್ರೆ ಅದ್ಯಾಕೆ ಈ ಸಂಸ್ಥೆಗೆ ಅವಾರ್ಡ್ ಕೊಟ್ರೆನೋ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಕಲಬುರಗಿಯಲ್ಲಿ ಈಶಾನ್ಯ ಸಾರಿಗೆಯ ಬಹುತೇಕ ಬಸ್ಗಳ ಡೀಸೆಲ್ ಟ್ಯಾಂಕರ್ಗಳಿಗೆ ಕ್ಯಾಪ್ಗಳೇ ಇಲ್ಲ.
ಆಶ್ಚರ್ಯ ಅಂದ್ರೆ ಅದನ್ನ ಮುಚ್ಚೋಕೆ ಏನೂ ಇಲ್ಲದೇ 1 ಮತ್ತು 2 ಲೀಟರ್ ನೀರಿನ ಬಾಟಲ್ ಗಳನ್ನೇ ಮುಚ್ಚಳ ಮಾಡಿ ಚಾಲಕರು ಬಸ್ ಚಲಾಯಿಸುತ್ತಿದ್ದಾರೆ. ಹಾಗಾಗಿ ತೈಲ ಸೋರಿಕೆಯಾಗಿ ಬಸ್ಗೆ ಬೆಂಕಿ ತಗಲುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವ ಕಾರಣ ಈ ಬಾಟಲಿ ಕ್ಯಾಪ್ ಅಂತು ಇನ್ನು ಡೆಂಜರಸ್ ಆಗಿದೆ ಅಂತ ನಿವಾಸಿ ಸಿದ್ದರಾಮಯ್ಯ ಹಿರೇಮಠ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಗೆ ಸಿಕ್ಕ ದಾಖಲೆಗಳ ಪ್ರಕಾರ ಕಲಬುರಗಿ ಡಿಪೋ ನಂಬರ್-4ರಲ್ಲಿಯೇ 23 ಬಸ್ಗಳಿಗೆ ಡೀಸೆಲ್ ಕ್ಯಾಪ್ಗಳಿಲ್ಲ. ಇನ್ನು ಈಶಾನ್ಯ ಸಾರಿಗೆಯ ಹೈದರಾಬಾದ್ ಕರ್ನಾಟಕದ 6 ಜಿಲ್ಲೆ ಅಂದ್ರೆ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಒಟ್ಟು 52 ಡಿಪೋಗಳಿದ್ದು, ಅದೆಷ್ಟು ಬಸ್ಗಳ ಡೀಸೆಲ್ ಟ್ಯಾಂಕ್ಗಳಿಗೆ ಕ್ಯಾಪ್ ಇಲ್ಲದೇ ಪ್ರಯಾಣಿಕರ ಸಾವಿಗೆ ಕಾಯ್ತಿದೆಯೋ ಗೋತ್ತಿಲ್ಲ. ಈ ಬಗ್ಗೆ ಈಶಾನ್ಯ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ, ಈ ಬಗ್ಗೆ ವರದಿ ಮಾಡಿದ್ದೇವೆ. ಆದ್ರೆ ಪ್ರಯೋಜನವಾಗಿಲ್ಲ ಅಂತಾ ಇಂಧನ ನಿರ್ವಾಹಕ ನಾಗರಾಜ್ ರೆಡ್ಡಿ ಹೇಳಿದ್ದಾರೆ.
ಒಟ್ಟಿನಲ್ಲಿ ಸೇಫ್ಟಿ ಪ್ರಶಸ್ತಿ ತೆಗೆದುಕೊಂಡು ಬೀಗುತ್ತಿರುವ ಈಶಾನ್ಯ ಸಾರಿಗೆ ಇಲಾಖೆ ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಮೂಲಕ ಅವಘಡ ನಡೆಯುವ ಮುನ್ನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv