ಬೆಂಗಳೂರು: ಸ್ಯಾಂಕಿ ಟ್ಯಾಂಕಿಗೆ ಹೋಗುವ ಮುನ್ನಾ ಜನರು ಈ ಆದೇಶವನ್ನು ನೋಡಲೇಬೇಕು. ಇನ್ಮುಂದೆ ಸ್ಯಾಂಕಿ ಕೆರೆಯ ದಡದಲ್ಲಿ ವಾಕ್ ಮಾಡುವವರಿಗೆ ಹೊಸ ನಿಯಮ ಜಾರಿಯಾಗಿದೆ.
ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಇನ್ಮುಂದೆ ತರ್ಪಣ ಬಿಡುವುದು, ಪೂಜೆ ಮಾಡುವುದು, ಫೋಟೋ ತೆಗೆಯೋದು, ನಾಯಿಗಳನ್ನು ವಾಕ್ಗೆ ಕರೆದುಕೊಂಡು ಹೋಗುವುದು ಎಲ್ಲವೂ ಕೂಡ ನಿಷಿದ್ಧವಾಗಿದೆ. ಈ ಬಗ್ಗೆ ಆದೇಶ ಫಲಕವನ್ನು ಕೂಡ ಕೆರೆಯಂಗಳದಲ್ಲಿ ಹಾಕಲಾಗಿದೆ.
ಬಿಬಿಎಂಪಿಯ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ತರ್ಪಣ ಬಿಡುವುದಕ್ಕೆ ಬೆಂಗಳೂರಿನಲ್ಲಿ ಕೆರೆಗಳೇ ಇಲ್ಲ, ನಾವು ಎಂಎಲ್ಎ ಮನೆಯಲ್ಲಿ ಅಥವಾ ಬಿಬಿಎಂಪಿ ಅಧಿಕಾರಿಗಳ ಮನೆಯ ಟ್ಯಾಂಕ್ನಲ್ಲಿ ಪಿಂಡ ಬಿಡಲು ಆಗುತ್ತಾ ಅಂತಾ ಪುರೋಹಿತರು ಕಿಡಿಕಾರಿದ್ದಾರೆ.
ಇದರ ಜೊತೆಗೆ ಹವ್ಯಾಸಿ ಫೋಟೋಗ್ರಾಫರ್ ಗಳ ಕೂಡ ಫೋಟೋ ನಿಷೇಧಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ಸೇರಿದಂತೆ ಎಲ್ಲಾ ಕಡೆ ಫೋಟೋಗ್ರಾಫಿಗೆ ನಿಷೇಧ ಹೇರಲಾಗಿದೆ. ಇಲ್ಲೂ ಫೋಟೋಗ್ರಾಫಿ ಬ್ಯಾನ್ ಮಾಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಬಿಬಿಎಂಪಿಗೆ ಮತ್ತೆ ಮನವಿ ಸಲ್ಲಿಸಲಿದ್ದೇವೆ ಎಂದು ಸಾರ್ವಜನಿಕರು ಪಬ್ಲಿಕ್ ಟಿವಿಗೆ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv