– ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದ ಕೇಸರಿ ಪಡೆ
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಜನರನ್ನು ಭೇಟಿಯಾಗಿ ಬಿಜೆಪಿ ನಾಯಕರು ಆರೋಗ್ಯ ವಿಚಾರಿಸಿದರು.
ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಸಂಸದರಾದ ಪಿ.ಸಿ.ಮೋಹನ್, ಡಾ. ಕೆ.ಸುಧಾಕರ್ ಆಸ್ಪತ್ರೆಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ಹರಿಹಾಯ್ದರು. ಇವರಿಗೂ ಮೊದಲು ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಭೇಟಿ ನೀಡಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ, 11 ಮಂದಿ ಸಾವು – ಮೃತರು ಯಾರು? ಇಲ್ಲಿದೆ ವಿವರ
ಬಸವರಾಜ್ ಬೊಮ್ಮಾಯಿ ಮಾತನಾಡಿ, 11 ಜನ ಸಾವನ್ನಪ್ಪಿರೋದು ದುಃಖದ ಸಂಗತಿ. ಕರ್ನಾಟಕದ ನಾಗರಿಕರಿಗೆ ಕೋಪ ಬಂದಿದೆ. ವಿಜಯೋತ್ಸವ ನಿಯಂತ್ರಣ ಮಾಡಲಿಕ್ಕೆ ಆಗಲಿಲ್ಲ ಅಂದರೆ, ಇಡೀ ಕರ್ನಾಟಕ ಜನರ ರಕ್ಷಣೆ ಮಾಡ್ತೀರಾ? ಇದು ಅನಿರೀಕ್ಷಿತ ಅಲ್ಲ, ಯಾಕಂದ್ರೆ ನೀವು ಪ್ಲಾನಿಂಗ್ ಮಾಡಿಲ್ಲ. ಒಂದೇ ಒಂದು ಸಭೆ ಮಾಡಿಲ್ಲ. ಯಾವ ಪ್ಲಾನಿಂಗ್ ಮಾಡಿಲ್ಲ. ಒಟ್ಟಾರೆ ಬೇಜವಾಬ್ದಾರಿ ಇದು. ಈ ಕೊಲೆಗೆ ಸರ್ಕಾರ ನೇರ ಕಾರಣ. ಸಿಎಂ, ಕೆಸಿಎ ಅಂತಾರೆ. ಆದರೆ ಸೆಕ್ಯುರಿಟಿ ಯಾರು ಕೊಡಬೇಕು? ಹಿರಿಯ ಪೊಲೀಸ್ ಅಧಿಕಾರಿಗಳು ಸುಮ್ಮನೆ ಇದ್ರು. ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಫಂಕ್ಷನ್ ಮಾಡದೇ, ರೋಡ್ ಶೋ ಮಾಡಬೇಕಿತ್ತು. ಪುನೀತ್ ರಾಜ್ಕುಮಾರ್ ಅವರ ನಿಧನದ ವೇಳೆ, ಹಳೆ ವಿಚಾರದ ಬಗ್ಗೆ ಯೋಚನೆ ಮಾಡಿ, 25 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು. ಆಗ ನಾವು ಪ್ಲಾನಿಂಗ್ ಮಾಡಿದ್ವಿ. ಗೃಹ ಸಚಿವರ ಪಾತ್ರ ಕಾಣಿಸ್ತಾ ಇಲ್ಲ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಚೇಲಗಳೇ ತುಂಬಿ ಹೋಗಿದ್ರು. ನಾಚಿಕೆ ಮರ್ಯಾದೆ ಇದ್ದರೆ ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು. ತನಿಖೆ ಘಟನೆಯ ಬಗ್ಗೆ ಆಗಬಾರದು, ಪೂರ್ವಯೋಜನೆ ವಿಫಲತೆ ಬಗ್ಗೆ ಆಗಬೇಕು. ಎಲ್ಲಿ ಹಿರಿಯ ಅಧಿಕಾರಿಗಳು ವೈಫಲ್ಯ ಆಗಿದ್ದಾರೆ, ಯಾವ ರಾಜಕಾರಣಿ ಪಾತ್ರ ಇದೆ ಅಂತ ತಿಳಿಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ
ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಹೋಗಿ, ಸೂತಕದ ವಾತಾವರಣ ಆಗಿದೆ. ಇದು ನಮಗೆ ತುಂಬಾ ದುಃಖ ತಂದಿದೆ. ಗಾಯಾಳುಗಳನ್ನು, ಮೃತರ ಸಂಬಂಧಿಕರನ್ನು ನಾವು ಮಾತಾಡಿಸಿದ್ದೇವೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು. ಚೆನೈ, ಮುಂಬೈ, ಎಲ್ಲಾ ಕಡೆ ಗೆದ್ದ ಸಂಭ್ರಮ ಮಾಡಿದ್ದಾರೆ, ಎಲ್ಲೂ ಹೀಗಾಗಿಲ್ಲ. ದುರಾಡಳಿ ಸರ್ಕಾರದಿಂದ ನಮ್ಮಲ್ಲಿ ಈ ದುರಂತ ನಡೆದಿದೆ. ಸಮಯೋಚಿತ ನಿರ್ಧಾರ ಮಾಡದೇ, ಅತ್ಯಂತ ಬೇಜವಬ್ದಾರಿಯಿಂದ ಸರ್ಕಾರ ನಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಮೃತರ ತಂದೆ-ತಾಯಿಗೆ ಶೋಕ ಜೀವನಪರ್ಯಂತ ಇರುತ್ತದೆ. ಸರ್ಕಾರ ವ್ಯವಸ್ಥೆ ಮಾಡಬೇಕಿತ್ತು. ಗೆದ್ದ ವಾತಾವರಣ ಅಲ್ಲಿಗಿಂತ ಇಲ್ಲಿ ಹೆಚ್ಚಿತ್ತು. ದೀಪಾವಳಿ ರೀತಿಯಲ್ಲಿ ಆಚರಿಸಲಾಗಿತ್ತು. ಈ ವಿಚಾರ ತಿಳಿದು ಬಂದೋಬಸ್ತ್ ಮಾಡಬೇಕಿತ್ತು. ಇಂಟಲಿಜೆನ್ಸ್ ಏನು ಮಾಡ್ತಾ ಇತ್ತು? ಸರ್ಕಾರದ ನಡೆ ಎಲ್ಲಾ ಗೊಂದಲಮಯವಾಗಿತ್ತು. ಕಾರ್ಯಕ್ರಮ ಚೇಂಜ್ ಆಗ್ತಾನೆ ಇತ್ತು. ಜನರ ರಕ್ಷಣೆ ಮಾಡುವ ಬದಲು ಈ ರೀತಿ ಬೇಜವಬ್ದಾರಿತನ ಮಾಡಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಅಂತ ಸಂಬಂಧಿಕರು ಆರೋಪ ಮಾಡ್ತಿದ್ದಾರೆ. ರೈತರು ನೂರು ಜನ ಹೋರಾಟ ಮಾಡಲು, ಬಂದರೆ ನೂರಾರು ಪೊಲೀಸ್ ಹಾಕಿ ಭದ್ರತೆ ಕೊಡೋ ಸರ್ಕಾರ, ಈಗ್ಯಾಕೆ ಭದ್ರತೆ ಕೊಡಲಿಲ್ಲ? ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿದೆ. ಈ ಘಟನೆಯ ಸೂಕ್ತ ತನಿಖೆ ಆಗಬೇಕು. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು. ಇದು ಸಾಮಾನ್ಯ ವಿಚಾರ ಅಲ್ಲ ಎಂದು ಮಾತನಾಡಿದರು. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ