ನವದೆಹಲಿ: ಆರ್ಬಿಐ ಉಪ ಗವರ್ನರ್ ವಿರಾಳ್ ಆಚಾರ್ಯ ಅವರು ತಮ್ಮ ಅಧಿಕಾರಾವಧಿ ಮುಗಿಯುವ 6 ತಿಂಗಳಿಗೂ ಮೊದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಜನವರಿ 2017ರಲ್ಲಿ ಆರ್ಬಿಐ ಸೇರಿದ ಆಚಾರ್ಯ ಅವರು ನ್ಯೂಯಾರ್ಕ್ ವಿವಿಯ ಸಿವಿ ಸ್ಟಾರ್ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ತೆರಳಿದ್ದಾರೆ.
ಈ ಹಿಂದೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ಆಚಾರ್ಯ ಅವರು ರೆಪೋ ದರ ಕಡಿತ ವಿಚಾರದಲ್ಲಿ ಭಿನ್ನ ನಿಲುವು ತಳೆದಿದ್ದರು. ಈ ಹಿಂದಿನ ಎಂಸಿಸಿ ಸಭೆಯಲ್ಲಿ ವಿರಾಳ್ ಆಚಾರ್ಯ, ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದ್ದರು. ಜೂನ್ ಮೊದಲ ವಾರದಲ್ಲಿ ನಡೆದಿದ್ದ ಎಂಸಿಸಿ ಸಭೆಯಲ್ಲಿ ಆರ್ಬಿಐನ ಆರು ಮಂದಿ ಸದಸ್ಯರಾದ ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಕೆಲ್ ಪಾತ್ರ, ಗವರ್ನರ್ ಶಕ್ತಿಕಾಂತ್ ದಾಸ್, ಡೆಪ್ಯೂಟಿ ಗವರ್ನರ್ ವಿರಾಳ್ ಆಚಾರ್ಯ, ಚೇತನ್ ಘಾಟ್ಗೆ ಎಲ್ಲರೂ ಸರ್ವಾನುಮತದಿಂದ ರೆಪೋ ದರವನ್ನು ಇಳಿಸುವ ನಿರ್ಧಾರವನ್ನು ಬೆಂಬಲಿಸಿದ್ದರು.
ಹಣಕಾಸು ನೀತಿ ಸಂಬಂಧ ಕೆಲವೊಂದು ವಿಚಾರದ ಬಗ್ಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ವರದಿಯಾಗಿದೆ.
ಆಚಾರ್ಯ ಅವರು 1995ರಲ್ಲಿ ಐಐಟಿ ಮುಂಬೈನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವಿ ಮುಗಿಸಿದ ಬಳಿಕ 2001 ರಲ್ಲಿ ನ್ಯೂಯಾರ್ಕಿನ ಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ನಲ್ಲಿ ಪಿಎಚ್ಡಿ ಪೂರ್ಣಗೊಳಿಸಿದರು. ಸ್ಟರ್ನ್ ಗೆ ಸೇರುವ ಮೊದಲು ಅವರು ಲಂಡನ್ ಬಿಸಿನೆಸ್ ಸ್ಕೂಲ್ನಲ್ಲಿ 2001-2008 ವರೆಗೆ ಇದ್ದ ಆಚಾರ್ಯ ಅವರು, ಅಕಾಡೆಮಿಯ ನಿರ್ದೇಶಕರಾಗಿ ಕಾಲರ್ ಇನ್ಸ್ಟಿಟ್ಯೂಟ್ ಆಫ್ ಪ್ರೈವೇಟ್ ಈಕ್ವಿಟಿ ಎಲ್ಬಿಎಸ್ ನಲ್ಲಿ 2007-09 ಸೇವೆ ಸಲ್ಲಿಸಿದ್ದರು.
ಅವಧಿಗೂ ಮುನ್ನವೇ ಆರ್ಬಿಐ ಗವರ್ನರ್ಗಳು ರಾಜೀನಾಮೆ ನೀಡುವುದು ಹೊಸದೆನಲ್ಲ. ಈ ಹಿಂದೆ ಡಿಸೆಂಬರ್ನಲ್ಲಿ ಗವರ್ನರ್ ಉರ್ಜಿತ್ ಪಾಟೀಲ್ ವೈಯಕ್ತಿಕ ಕಾರಣಗಳನ್ನು ತಿಳಿಸಿ ಒಂಬತ್ತು ತಿಂಗಳ ಮೊದಲೇ ರಾಜೀನಾಮೆ ನೀಡಿದ್ದರು.