– ಮಾತಿನ ಭರದಲ್ಲಿ ಶ್ರೀಕಂಠಯ್ಯ ಎಡವಟ್ಟು
– ಸುಮಲತಾ ಪರ ಪ್ರಚಾರ ಮಾಡೋರಲ್ಲಿ ಯಾರು ಜಿಲ್ಲೆಗಾಗಿ ದುಡಿದಿದ್ದಾರೆ?
ಮಂಡ್ಯ: ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಮಾತಿನ ಭರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕರು, “ಸುಮಲತಾ ಅವರು ಕಾಂಗ್ರೆಸ್ ಅಭ್ಯರ್ಥಿ” ಎಂದು ಹೇಳಿದರು. ತಕ್ಷಣವೇ ಕಾರ್ಯಕರ್ತರು, ಮೈತ್ರಿ ಪಕ್ಷಗಳ ಸ್ಥಳೀಯ ಮುಖಂಡರು “ಅಲ್ಲ, ಅಲ್ಲ” ಎಂದು ಕೂಗಿದರು. ಶಾಸಕರು ಕೂಡಲೇ ಎಚ್ಚೆತ್ತುಕೊಂಡು ತನ್ನ ಹೇಳಿಕೆಯನ್ನು ಸರಿಪಡಿಸಿಕೊಂಡು,”ಸುಮಲತಾ ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ” ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸುವ ಪ್ರಸ್ತಾವನೆ ಇರಲಿಲ್ಲ. ನಮ್ಮ ಒತ್ತಾಯದ ಮೇರೆಗೆ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಮಾಜಿ ಸಚಿವ ಅಂಬರೀಶ್ ಅವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದಾರೆ. ಆದರೂ ಮೂರು ಬಾರಿ ಕಾಂಗ್ರೆಸ್ಸಿನ ಠೇವಣಿ ಕಳೆದರು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಭವಿಷ್ಯ ಧೂಳೀಪಟವಾಯಿತು ಎಂದು ವ್ಯಂಗ್ಯವಾಡಿದರು.
ಮಧ್ಯರಾತ್ರಿ ದುಡ್ಡು ಪಡೆದವರನ್ನು ನೀವು ನಂಬಿದ್ದೀರಿ. ಪ್ರಾಮಾಣಿಕ ಕಾಂಗ್ರೆಸ್ಸಿಗರನ್ನು ನೀವು ಧೂಳೀಪಟ ಮಾಡುತ್ತಾ ಇದ್ದೀರಿ. 30 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದು ದ್ರೋಹ ಮಾಡುತ್ತಿರುವಿರಿ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಉಪವಾಸ ಕುಳಿತ್ತಿದ್ದರಿಂದ ಕಾವೇರಿ ಉಳಿಯಿತು. ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಜಿಲ್ಲೆಯ ಜನರಿಗೆ ತೊಂದರೆ ಕೊಟ್ಟು ರಾಜಕಾರಣ ಮಾಡಬೇಡಿ. ನಿಮ್ಮ ಪರ ಪ್ರಚಾರ ಮಾಡುತ್ತಿರುವವರಲ್ಲಿ ಯಾರು ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ? ಪ್ರಚಾರಕ್ಕೆ ಸಿನಿಮಾದವರನ್ನು ಕರೆದುಕೊಂಡು ಬಂದಿದ್ದೀರಿ. ಅಭಿವೃದ್ಧಿ ವಿಚಾರವಾಗಿ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.