ಮೆಲ್ಬರ್ನ್: ಬಹು ನಿರೀಕ್ಷೆಯ ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಆಟಗಾರರ ಗಾಯದ ಸಮಸ್ಯೆ ತಲೆನೋವಾಗಿದ್ದು, ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯವುದು ಅನುಮಾನವಾಗಿದೆ.
ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಕೋಚ್ ರವಿಶಾಸ್ತ್ರಿ, ಅಶ್ವಿನ್ ತಮ್ಮ ಗಾಯದ ಸಮಸ್ಯೆ ಚೇತರಿಸಿಕೊಳ್ಳುತ್ತಿದ್ದು, ಮುಂದಿನ 48 ಗಂಟೆಗಳ ಕಾಲ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ತಂಡದ ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಟೆಸ್ಟ್ ಸರಣಿಯಲ್ಲಿ ಆಸೀಸ್ ತಂಡ ಸಮಬಲದ ಹೋರಾಟ ನೀಡಿದ್ದು, ಸರಣಿಯಲ್ಲಿ ಮುನ್ನಡೆ ಪಡೆಯಲು ಮೆಲ್ಬರ್ನ್ ಪಂದ್ಯದ ಗೆಲುವು ಅನಿವಾರ್ಯವಾಗಿದೆ. ಆದರೆ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಕೊರತೆಯನ್ನು ಎದುರಿಸಿದ್ದು, ಆಸೀಸ್ ಪರ ಏಕೈಕ ಸ್ಪಿನ್ನರ್ ಆಗಿ ಕಣಕ್ಕೆ ಇಳಿದಿದ್ದ ಲಯನ್ 8 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು.
ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದರೂ ಕೂಡ ಅನುಭವಿ ಸಿನ್ನರ್ ಕೊರತೆಯಿಂದ ಈ ಹಿಂದಿನ ಪಂದ್ಯದಲ್ಲಿ ಸಮಸ್ಯೆ ಎದುರಿಸಿತ್ತು. ಉಳಿದಂತೆ ತಂಡಕ್ಕೆ ಆರಂಭಿಕರ ವೈಫಲ್ಯ ಕೂಡ ಬ್ಯಾಟಿಂಗ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಇತ್ತ ಮೊದಲ ಟೆಸ್ಟ್ಗೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಕೂಡ ಇನ್ನು ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ.
ಉಳಿದಂತೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿರುವ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಕೆಯಾದ ಬಳಿಕ ಕೇವಲ ಒಂದು ರಣಜಿ ಪಂದ್ಯವನ್ನು ಆಡಿದ್ದು, ಆಸೀಸ್ ಟೆಸ್ಟ್ ತಂಡದ ಆಡುವ 11 ಬಳಗದಲ್ಲಿ ಸ್ಥಾನ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಒಂದೊಮ್ಮೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದರೆ ಯುವ ಆಟಗಾರ ಹನುಮವಿಹಾರಿ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.
ಆರಂಭಿಕ ವೈಫಲ್ಯದ ಕಾರಣ ಕರ್ನಾಟಕ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಳ್ಳುವ ನಿರೀಕ್ಷೆ ಇದ್ದು, ಆರಂಭಿಕ ಸಮಸ್ಯೆಗೆ ಮಯಾಂಕ್ ಸೂಕ್ತ ಆಯ್ಕೆ ಆಗಲಿದ್ದಾರೆ. ಮಯಾಂಕ್ ಆಯ್ಕೆಯಾದರೆ ಕೆಎಲ್ ರಾಹುಲ್ ಅಥವಾ ಮುರಳಿ ವಿಜಯ್ ಅವಕಾಶ ವಂಚಿತರಾಗುವುದು ನಿಶ್ಚಿತವಾಗಿದೆ. ಡಿಸೆಂಬರ್ 26 ರಿಂದ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv