ಅಹಮದಾಬಾದ್ನಲ್ಲಿ (Ahmedabad) ನಡೆದ ವಿಮಾನ ಪತನದ ಬಳಿಕ ದೇಶದ ಜನತೆಗೆ ಇಂದಿಗೂ ದುರ್ಘಟನೆಯ ನೋವಿನಿಂದ ಹೊರಬರಲಾಗುತ್ತಿಲ್ಲ. ಈ ವೇಳೆ ಏರ್ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ ಧೈರ್ಯ ಹೇಳುವ ಪೋಸ್ಟ್ ಹಾಕಿದ್ದಾರೆ ನಟಿ ರವೀನಾ ಟಂಡನ್ (Raveena Tandon).
ಏರ್ಇಂಡಿಯಾದ (Air India) ಟಿಕೆಟ್ ಪಡೆದು ವಿಮಾನದಲ್ಲಿ ಕುಳಿತಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರವೀನಾ, ಏರ್ ಇಂಡಿಯಾ ಸಿಬ್ಬಂದಿಗಳಲ್ಲಿ ಇನ್ನೂ ಅವಿತಿರುವ ಬೇಸರ, ದುಃಖದಿಂದ ಕೂಡಿರುವ ನಗು ಹಾಗೂ ಪ್ರಯಾಣಿಕರ ಮೌನದ ಕುರಿತು ಸುದೀರ್ಘವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.
ಅಹಮದಾಬಾದ್ನಿಂದ ಲಂಡನ್ಗೆ ತೆರಳುವ ಏರ್ ಇಂಡಿಯಾ ವಿಮಾನದಲ್ಲಿ ದುರ್ಘಟನೆಯಲ್ಲಿ 265ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಈ ನೋವು ದೇಶದ ಜನರಲ್ಲಿ ಆತಂಕ ಮೂಡಿಸಿದೆ ಜೊತೆಗೆ ಏರ್ ಇಂಡಿಯಾ ವಿಮಾನ ಪ್ರಯಾಣಿಕರ ಸಂಖ್ಯೆಯನ್ನೂ ಕುಗ್ಗಿಸುತ್ತಿದೆ. ಈ ಹೊತ್ತಲ್ಲೇ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸಿರುವ ರವೀನಾ ಒಂದಿಷ್ಟು ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದ್ದಾರೆ.
“ಪ್ರತಿಕೂಲಗಳ ವಿರುದ್ಧ ಎದ್ದು ನಿಲ್ಲಬೇಕಿದೆ, ಎಲ್ಲವನ್ನೂ ಬಾಚಿಕೊಂಡು ಪ್ರಾರಂಭಿಸಬೇಕು, ಹೊಸ ಆರಂಭಗಳಾಗಬೇಕು, ಹೊಸ ಶಕ್ತಿಯ ಕಡೆಗೆ ಸಂಕಲ್ಪ ಶುರುವಾಗಬೇಕು, ವಾತಾವರಣ ಗಂಭೀರವಾಗಿದ್ದರೂ ಏರ್ ಇಂಡಿಯಾ ಸಿಬ್ಬಂದಿಗಳು ದುಃಖದೊಂದಿಗೆ ನಗುವಿನ ಮುಖದಲ್ಲಿ ಸ್ವಾಗತಿಸುತ್ತಾರೆ. ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಮೌನವು ಮಾತನಾಡದೇ ಸಂತಾಪ ಸೂಚಿಸುತ್ತಿದೆ. ಇದು ಎಂದಿಗೂ ವಾಸಿಯಾಗದ ಗಾಯ. ಏರ್ಇಂಡಿಯಾಗೆ ಯಾವಾಗಲೂ ದೇವರೇ ದಿಕ್ಕು. ನಿರ್ಭೀತಿಯಿಂದ ಎಲ್ಲವನ್ನೂ ಜಯಿಸಲು ಇಚ್ಛಾಶಕ್ತಿಯೇ ಬಲವಾಗಬೇಕು” ಎಂದಿದ್ದಾರೆ ರವೀನಾ ಟಂಡನ್.
ದುರ್ಘಟನೆಯ ಬಳಿಕ ಏರ್ಇಂಡಿಯಾ ವಿಮಾನ ಪ್ರಯಾಣಿಕರ ಸಂಖ್ಯೆಯೂ ಕುಸಿಯುತ್ತಿದೆ. ಈ ಹೊತ್ತಲ್ಲಿ ಅದೇ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರಿಗೂ ಹಾಗೂ ಸಿಬ್ಬಂದಿಗಳಿಗೂ ಒಂದಿಷ್ಟು ಆತ್ಮವಿಶ್ವಾಸ ತುಂಬುವ ಮಾತನ್ನ ಪದಗಳಲ್ಲಿ ಹೇಳಿದ್ದಾರೆ ಬಾಲಿವುಡ್ ನಟಿ ರವೀನಾ ಟಂಡನ್. ಸದ್ಯದ ಏರ್ಇಂಡಿಯಾ ಪ್ರಯಾಣದ ಪರಿಸ್ಥಿತಿಯನ್ನ ಅವರ ಮಾತುಗಳಲ್ಲಿ ವಿವರಿಸಿದ್ದಾರೆ ನಟಿ.