ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕುರಿತಾದ ಟ್ರೋಲ್ ವಿಚಾರ ಎರಡು ದಿನಗಳಿಂದ ವಿಪರೀತ ಸುದ್ದಿಯಲ್ಲಿದೆ. ತಾವು ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ಈವರೆಗೂ ರಶ್ಮಿಕಾ ಕುರಿತು ನೆಗೆಟಿವ್ ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೇ, ಸಲ್ಲದ ಆರೋಪಗಳನ್ನೂ ಹೊರಿಸಲಾಗುತ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಇದೀಗ ರಶ್ಮಿಕಾ ಪರ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಬ್ಯಾಟಿಂಗ್ ಮಾಡಿದ್ದಾರೆ. ಯಾರನ್ನೂ ಯಾರೂ ಜಡ್ಜ್ ಮಾಡಬಾರದು ಎಂದು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಯಾರೂ ಯಾರನ್ನೂ ಜಡ್ಜ್ ಮಾಡಬಾರದು. ಅವರ ಜೀವನ ಅವರಿಗೆ ಮಾತ್ರ ಗೊತ್ತಿರುತ್ತದೆ. ಟ್ರೋಲಿಂಗ್ ನಿಲ್ಲದ ಸಂಗತಿಯಾದರೂ, ಬೇರೆಯವರನ್ನು ನೀವು ಜಡ್ಜ್ ಮಾಡುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಅವರ ಪಾಡಿಗೆ ಅವರನ್ನು ಬದುಕುವುದಕ್ಕೆ ಬಿಡಿ ಎಂದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ಪರವಾಗಿ ರಮ್ಯಾ ನಿಂತಿದ್ದಾರೆ.
ತಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ
ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಅಂದರೆ, ಅದರ ಅರ್ಥ ನೆಗೆಟಿವಿವ್ ಹರಡಬಹುದು ಎನ್ನುವುದು ಅರ್ಥವಲ್ಲ ಎಂದು ಅವರು ತಿರುಗೇಟು ಕೂಡ ನೀಡಿದ್ದಾರೆ. ಸಂದರ್ಶನವೊಂದರ ಕುರಿತೂ ಮಾತನಾಡಿರುವ ಅವರು, ನನ್ನ ಸಂದರ್ಶನವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನೂ ಸಿಗುವುದಿಲ್ಲ. ಒಳ್ಳೆಯದನ್ನು ನಾನು ಯಾವತ್ತಿಗೂ ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈವರೆಗೂ ನಾನು ಯಾರನ್ನೂ ದ್ವೇಷಿಸಿಲ್ಲ. ನನ್ನೊಂದಿಗೆ ಕೆಲಸ ಮಾಡಿದವರ ಜೊತೆ ಗೌರವದಿಂದ ಇದ್ದೇನೆ. ಎಲ್ಲರನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ, ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಹರಡುತ್ತಲೇ ಇದ್ದರು. ಅದರಿಂದ ಯಾರಿಗೂ ಸಂತೋಷ ಸಿಗುವುದಿಲ್ಲ. ನಾನೂ ಸಾಕಷ್ಟು ನೊಂದುಕೊಂಡಿದ್ದೇನೆ ಎಂದು ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.