ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪಮೊಯ್ಲಿ ಪರ ಪುತ್ರಿ ರಶ್ಮಿ ಮೊಯ್ಲಿ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲಿ ಮತಯಾಚನೆ ಮಾಡಿದ್ದಾರೆ.
ತಂದೆ ಪರ ವೀರಪ್ಪಮೊಯ್ಲಿ ಮತ ಹಾಕುವಂತೆ ಮನವಿ ಮಾಡಿದ ರಶ್ಮಿ ಮೊಯ್ಲಿ ಅವರಿಗೆ ಮತದಾರರು ಪ್ರಶ್ನೆ ಮಾಡಿದ್ದಾರೆ. ವೀರಪ್ಪಮೊಯ್ಲಿ ಅವರಿಗೆ ಮತ ಏಕೆ ಹಾಕಬೇಕು. ನಿಮ್ಮ ತಂದೆಯವರು ನೀರು ಕೊಡುತ್ತೇನೆ ಎಂದು ಹೇಳಿ ಹೇಳಿ ಎರಡು ಸಲ ಗೆಲುವು ಪಡೆದಿದ್ದಾರೆ. ಈಗ ನೀರು ಎಲ್ಲಿ ತಾಯಿ ಎಂದು ಪ್ರಶ್ನೆ ಮಾಡಿದ್ದಾರೆ.
ಇಡಗೂರು ಗ್ರಾಮದಲ್ಲಿ ಮತಯಾಚನೆಗೆ ಮುಂದಾದ ರಶ್ಮಿ ಮೊಯ್ಲಿಗೆ ಮತದಾರರು ನಾವು ನೀರು ನೀರು ಅಂತಿದ್ದೀವಿ ಇಲ್ಲಿ. 5 ವರ್ಷದಿಂದ ನೀರು ಅಲ್ಲೇ ಇದೆ. ಮುಂದಕ್ಕೆ ಬರಲೇ ಇಲ್ಲ. ನಾನು ಧರ್ಮಸ್ಥಳದ ಕಡೆಗೆ ಹೋದಾಗಲೆಲ್ಲಾ ನೋಡುತ್ತೇನೆ. ನೀರು ಅಲ್ಲೇ ಇದೆ. ಸಿದ್ದರಾಮಯ್ಯ ಸಿಎಂ ಅಗಿದ್ದಾಗಲೇ ಮನಸ್ಸು ಮಾಡಿದರೆ ಇಷ್ಟೊತ್ತಿಗೆ ನೀರು ಕೊಡಬಹುದಿತ್ತು. ಆದರೆ ಈಗ ಏನು ಮಾಡೋಕೆ ಅಗುತ್ತೆ ಎಂದು ಮತದಾರರು ಪ್ರಶ್ನೆ ಮಾಡಿದ್ದಾರೆ.
ಮತದಾರರ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಜಾರಿದ ರಶ್ಮಿ ಮೊಯ್ಲಿ ಅವರು ಏನು ಮಾತನಾಡದೆ ನಿರುತ್ತರಾಗಿದ್ದರು. ಈ ಹಂತದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮನವೊಲಿಸುವ ಕಸರತ್ತು ನಡೆಸಿದ್ದರು.