ವಡೋದರಾ: 2019-20ರ ರಣಜಿ ಟ್ರೋಫಿಯಲ್ಲಿ ಮುಂಬೈ ಶುಭಾರಂಭ ಮಾಡಿದ್ದು, ಬರೋಡಾ ವಿರುದ್ಧ 309 ರನ್ ಅಂತರದ ಜಯವನ್ನು ಪಡೆದಿದೆ. ಪಂದ್ಯದಲ್ಲಿ ಮುಂಬೈ ಪರ ಯುವ ಆಟಗಾರ ಪೃಥ್ವಿ ಶಾ ದ್ವಿಶತಕ ಸಿಡಿಸಿ ಗಮನ ಸೆಳೆದರೆ, ಹಿರಿಯ ಆಟಗಾರ ಯೂಸುಫ್ ಪಠಾಣ್ ಆನ್ಫೀಲ್ಡ್ ಅಂಪೈರ್ ವಿರುದ್ಧ ಗರಂ ಆದ ಘಟನೆ ನಡೆದಿದೆ.
ಬರೋಡದ 2ನೇ ಇನ್ನಿಂಗ್ಸ್ ನಲ್ಲಿ ಘಟನೆ ನಡೆದಿದ್ದು, ಮುಂಬೈ ಸ್ಪಿನ್ನರ್ ಶಶಾಂಕ್ ಅರ್ಥಡೆ ಎಸೆದ 41ನೇ ಓವರಿನ ಎಸೆತವನ್ನು ಪಠಾಣ್ ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಆದರೆ ಯೂಸುಫ್ರ ಪ್ಯಾಡ್ಗೆ ಬಡಿದ ಚೆಂಡು ಎದೆಗೆ ತಾಗಿ ಶಾರ್ಟ್ ಲೆಗ್ನಲ್ಲಿದ್ದ ಫೀಲ್ಡರ್ ಕೈಸೇರಿತ್ತು. ಮುಂಬೈ ಆಟಗಾರರು ಔಟ್ ಮನವಿ ಸಲ್ಲಿಸಿದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
— Utkarsh Bhatla (@UtkarshBhatla) December 13, 2019
ಅಂಪೈರ್ ತೀರ್ಮಾನದಿಂದ ಕ್ಷಣ ಕಾಲ ಅಘಾತಕ್ಕೆ ಒಳಗಾದ ಯೂಸಫ್ ಕ್ರೀಸ್ನಲ್ಲೇ ನಿಂತರು. ಚೆಂಡು ಬ್ಯಾಟ್ ಅಥವಾ ಗ್ಲೌಸ್ಗೂ ತಾಗದೆ ಫೀಲ್ಡರ್ ಕೈಸೇರಿದ್ದು ರೀಪ್ಲೆಯಲ್ಲಿ ಸ್ಪಷ್ಟವಾಗಿ ಕಾಣುತಿತ್ತು. ಅಂಪೈರ್ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಯೂಸುಫ್ ಕ್ರಿಸ್ನಲ್ಲಿ ನಿಂತಿರುವುದನ್ನು ಕಂಡ ರಹಾನೆ ಕೂಡ ಕ್ಷಣ ಕಾಲ ಸಿಟ್ಟಾದರು. ಅಂತಿಮವಾಗಿ ಅಂಪೈರ್ ತೀರ್ಪಿನಂತೆ 14 ರನ್ ಗಳಿಸಿದ್ದ ಯೂಸುಫ್ ಒಲ್ಲದ ಮನಸ್ಸಿನಿಂದ ಪೆವಿಲಿಯನ್ನತ್ತ ನಡೆದರು.
ಇದುವರೆಗೂ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಡಿಆರ್ ಎಸ್ ಅಳವಡಿಸುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಅಂಪೈರ್ ಕೆಟ್ಟ ತೀರ್ಪಿಗೆ ಬಲಿಯಾದ 37 ವರ್ಷದ ಯೂಸುಫ್ ಒಂದೊಮ್ಮೆ ಡಿಆರ್ ಎಸ್ ಮನವಿಯ ಅವಕಾಶ ಹೊಂದಿದ್ದರೆ ತಮ್ಮ ವಿಕೆಟ್ ಕಾಯ್ದುಕೊಳ್ಳುತ್ತಿದ್ದರು.
ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 431 ರನ್ ಗಳಿಸಿದ ಮುಂಬೈ, ಎದುರಾಳಿ ತಂಡವನ್ನು 307 ರನ್ ಗಳಿಗೆ ಕಟ್ಟಿಹಾಕಿ 2ನೇ ಇನ್ನಿಂಗ್ಸ್ ಆರಂಭಿಸಿತು. ಪೃಥ್ವಿ ಶಾ 2ನೇ ಇನ್ನಿಂಗ್ಸ್ ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಕಾರಣ ಮುಂಬೈ ತಂಡ 4 ವಿಕೆಟ್ ಕಳೆದುಕೊಂಡು 409 ರನ್ ಗಳಿಗೆ ಡಿಕ್ಲೇರ್ ನೀಡಿತು. ಗೆಲ್ಲಲು 534 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಬರೋಡ ತಂಡ 224 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲುಂಡಿತು. ಪಂದ್ಯದಲ್ಲಿ 10 ವಿಕೆಟ್ ಪಡೆದ ಶಮ್ಸ್ ಮುಲಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.