ಚಾಮರಾಜನಗರ: ನಿವೃತ್ತಿ ಅಂಚಿನಲ್ಲಿ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ನೀಡಿ ಗಮನ ಸೆಳೆದಿದ್ದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದರು.
ಭೇಟಿ ನೀಡಿದ ವೇಳೆ ಸುತ್ತೂರು ಮಠದಲ್ಲಿ ಆಶ್ರಯ ಪಡೆದಿರುವ ಅಸ್ಸಾಂ ರಾಜ್ಯದ ವಿದ್ಯಾರ್ಥಿನಿಯರು ರಂಜನ್ ಗೊಗೊಯ್ ಅವರನ್ನು ಬರಮಾಡಿಕೊಂಡರು. ಬಳಿಕ ಗೊಗೊಯ್ ದಂಪತಿಗೆ ಪೂರ್ಣಕುಂಭಸ್ವಾಗತ ಕೋರಲಾಯಿತು.
ಕೆಲ ಹೊತ್ತು ಸುತ್ತೂರು ಶ್ರೀಗಳೊಂದಿಗೆ ರಂಜನ್ ಗೊಗೊಯ್ ಸಮಾಲೋಚನೆ ನಡೆಸಿದರು. ಬಳಿಕ ಅಸ್ಸಾಂ ರಾಜ್ಯದ ವಿದ್ಯಾರ್ಥಿನಿಯರು ಬಸವಣ್ಣನ ವಚನಗಳನ್ನು ಹೇಳುವ ಮೂಲಕ ರಂಜನ್ ಗೊಗೊಯ್ ಅವರ ಗಮನ ಸೆಳೆದರು.
ಇದೇ ವೇಳೆ ಸುತ್ತೂರು ಶ್ರೀಗಳು, ಗೊಗೊಯ್ ದಂಪತಿಗೆ ಮೈಸೂರು ಪೇಟಾ ತೊಡಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿದರು.