ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ್ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಈ ತಿಂಗಳ 15 ರಿಂದ ಮುಂದಿನ ಎರಡು ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತಿದೆ.
ಸುಮಾರು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೇವಾಲಯ ಶಿಥಿಲಗೊಂಡಿರುವುದರಿಂದ ದೇವಾಲಯವನ್ನು ಸದ್ಯ 2.90 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆಯಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಮುಂದಿನ ವಾರದಿಂದ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭವಾಗಲಿದೆ.
ದೇವಸ್ಥಾನದ ಕಾಮಗಾರಿ ಹಿನ್ನೆಲೆಯಲ್ಲಿ ಭಕ್ತಾದಿಗಳು ಮಾರ್ಚ್ 15 ರವರೆಗೆ ರಂಗನಾಥ್ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ. ಮಾರ್ಚ್ 15ರ ನಂತರ ಪೂಜೆ ವಿಧಿವಿಧಾನಗಳ ಮೂಲಕ ದೇವರ ಹಾಗೂ ಅಮ್ಮನವರ ವಿಗ್ರಹಗಳನ್ನು ಮುಚ್ಚಿಡಲಾಗುತ್ತದೆ. ಮಾರ್ಚ್ 18 ರಂದು ಧಾರ್ಮಿಕ ದತ್ತಿ ಇಲಾಖೆಗೆ ದೇವಾಲಯವನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಹಿಂದೆ ಇದ್ದ ಪ್ರಾಚೀನ ಶೈಲಿಯ ಮಾದರಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ ಎರಡು ವರ್ಷಗಳ ಕಾಲ ದೇವಾಲಯದಲ್ಲಿ ನಡೆಯುವ ಚಿಕ್ಕ ಮತ್ತು ದೊಡ್ಡ ರಥೋತ್ಸವಗಳನ್ನು ಕೂಡ ರದ್ದುಗೊಳಿಸಲಾಗಿದೆ.