ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ನಟಿಸಿರೋ ರಾಂಧವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎರಡು ತಲೆಮಾರುಗಳ ರೋಚಕ ಕಥೆ ಹೊಂದಿರೋ ಈ ಚಿತ್ರದಲ್ಲಿ ಭುವನ್ ಮಹಾ ಪರಾಕ್ರಮಿ ರಾಜನಾಗಿಯೂ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಭಿನ್ನಾತಿಭಿನ್ನವಾದ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರೋ ಪ್ರೇಕ್ಷಕರಿಗೊಂದು ಸರ್ಪ್ರೈಸ್ ನೀಡಲು ರಾಂಧವ ಚಿತ್ರ ತಂಡ ತಯಾರಾಗಿದೆ.
ನಿರ್ದೇಶಕ ಸುನೀಲ್ ಆಚಾರ್ಯ ನಾಳೆ ಸಂಜೆ ಆರು ಘಂಟೆಗೆ ರಾಂಧವನ ಅಚ್ಚರಿದಾಯಕ ವೀಡಿಯೋ ಒಂದನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ತೀರ್ಮಾನಿಸಿದ್ದಾರೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಮಾಡಿದ್ದೇನೆಂಬುದರ ವಿವರ ಆ ವೀಡಿಯೋದಲ್ಲಿ ಜಾಹೀರಾಗಲಿದೆಯಂತೆ. ಕನ್ನಡತನವನ್ನು ಅವಹೇಳನ ಮಾಡಿದ ತಮಿಳನಿಗೆ ರಾಜ ರಾಂಧವ ಮಾಡಿದ್ದೇನೆಂಬ ಕುತೂಹಲ ನಾಳೆ ಸಂಜೆ ಆರು ಘಂಟೆಗೆ ತಣಿಯಲಿದೆ.
ಈ ವೀಡಿಯೋ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಮೂಲಕವೇ ರಾಂಧವನಾಗಿ ಭುವನ್ ಅಬ್ಬರಿಸಿರೋ ರೀತಿ ಮತ್ತು ಇಡೀ ಕಥೆಯ ಸ್ಪೆಷಾಲಿಟಿಯೂ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆಯಂತೆ. ಅಷ್ಟಕ್ಕೂ ಈ ಚಿತ್ರದ ಹಿಂದೆ ಅಖಂಡ ಎರಡು ವರ್ಷಗಳ ಕಾಲದ ಅಗಾಧ ಪರಿಶ್ರಮವಿದೆ. ಇದಕ್ಕಾಗಿ ನಿರ್ದೇಶಕ ಸುನೀಲ್ ಆಚಾರ್ಯ ಸೇರಿದಂತೆ ಇಡೀ ಚಿತ್ರ ತಂಡ ನಿರಂತರವಾಗಿ ಶ್ರಮ ವಹಿಸಿದೆ.
ಇನ್ನು ಭುವನ್ ಅವರಂತೂ ಈ ಚಿತ್ರಕ್ಕಾಗಿ ಎರಡು ವರ್ಷಗಳನ್ನೂ ಪಣವಾಗಿಟ್ಟಿದ್ದಾರೆ. ಇದರಲ್ಲಿನ ಪಾತ್ರ ಪಳಗಿದ ನಟರಿಗೂ ಕಷ್ಟವಾಗುವಂಥಾದ್ದು. ಇಲ್ಲಿ ಅವರಿಗೆ ಒಂದಷ್ಟು ಶೇಡಿನ ಪಾತ್ರಗಳಿವೆ. ಅದನ್ನು ಭುವನ್ ಯಾವ ರೀತಿಯಲ್ಲಿ ನಿರ್ವಹಿಸಿದ್ದಾರೆಂಬುದಕ್ಕೆ ನಾಳೆ ಹೊರ ಬರೋ ವೀಡಿಯೋದಲ್ಲಿ ಸಾಕ್ಷಿಗಳು ಸಿಗಲಿವೆ.
https://www.youtube.com/watch?v=eRpnWE0j_mQ