ನವದೆಹಲಿ: ಜಾಮೀನು ಪಡೆಯಲು ಕುರಾನ್ ಹಂಚುವಂತೆ ಷರತ್ತು ವಿಧಿಸಿದ್ದ ನ್ಯಾಯಾಲಯದ ಆದೇಶದ ವಿರುದ್ಧ ಹೋರಾಟ ತೀವ್ರಗೊಂಡ ಹಿನ್ನೆಲೆ ರಾಂಚಿ ನ್ಯಾಯಾಲಯ ತನ್ನ ಷರತ್ತನ್ನು ರದ್ದುಪಡಿಸಿದೆ.
ಸೋಮವಾರ ಐದು ಕುರಾನ್ ಪ್ರತಿಗಳನ್ನು ಹಂಚುವಂತೆ ರಾಂಚಿ ಕೋರ್ಟ್ ವಿದ್ಯಾರ್ಥಿನಿಗೆ ಆದೇಶ ನೀಡಿದ ಬೆನ್ನಲ್ಲೆ, ವಿವಾದ ಸೃಷ್ಟಿಯಾಗಿತ್ತು. ವಿದ್ಯಾರ್ಥಿನಿ ನಾನು ಕುರಾನ್ ಪ್ರತಿಯನ್ನು ಹಂಚುವುದಿಲ್ಲ ಎಂದು ಹೇಳಿದ್ದಳು. ಅಲ್ಲದೆ, ಹಿಂದೂ ಪರ ಸಂಘಟನೆಗಳು, ವಕೀಲರು, ವಕೀಲರ ಸಂಘ ಈ ಕುರಿತು ಬೀದಿಗಿಳಿದು ಹೋರಾಟ ನಡೆಸಿದ ಬೆನ್ನಲ್ಲೇ ಕೋರ್ಟ್ ತನ್ನ ಷರತ್ತನ್ನು ಹಿಂಪಡೆದಿದೆ.
https://twitter.com/Dharma2X/status/1151740594839945218
ತನಿಖಾಧಿಕಾರಿ ಮೂಲಕ ಈ ಷರತ್ತನ್ನು ಕೋರ್ಟ್ ಹಿಂಪಡೆದಿದೆ. ಕುರಾನ್ ದಾನ ಮಾಡುವ ಷರತ್ತನ್ನು ಅನುಷ್ಠಾನಗೊಳಿಸುವುದರಿಂದ ಆಗುವ ತೊಂದರೆಯನ್ನು ಅರಿತು ಇದರಿಂದ ದೂರವಿರಬೇಕು ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೀಗಾಗಿ ನ್ಯಾ.ಮನೀಶ್ ಕುಮಾರ್ ಸಿಂಗ್ ಅವರು ಕುರಾನ್ ವಿತರಿಸುವ ಅಂಶವನ್ನು ಮಾರ್ಪಾಡು ಮಾಡಿದ್ದಾರೆ.
ವಿದ್ಯಾರ್ಥಿನಿ ರಿಚಾ ಭಾರತಿ ಇದೀಗ 7 ಸಾವಿರ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಿ ಜಾಮೀನು ಪಡೆದಿದ್ದಾಳೆ. ಜಾಮೀನಿಗೆ ಕುರಾನ್ ವಿತರಿಸಬೇಕು ಎಂದು ಷರತ್ತು ವಿಧಿಸುವುದು ಸರಿಯಲ್ಲ. ಈ ಆದೇಶವನ್ನು ಮೇಲಿನ ನ್ಯಾಯಾಲಯಕ್ಕೆ ಪ್ರಶ್ನೆ ಮಾಡುವುದಾದರೆ ನಾವು ರಿಚಾಗೆ ಹಣಕಾಸಿನ ನೆರವು ನೀಡುತ್ತೇವೆ ಎಂದು ಹಲವು ಮಂದಿ ಮುಂದೆ ಬಂದಿದ್ದರು.

ನ್ಯಾಯಾಧೀಶರು ಮಂಡಿಸಿದ ಜಾಮೀನು ಷರತ್ತಿನ ವಿರುದ್ಧ ಹಲವು ವಕೀಲರು, ಹಿಂದೂ ಸಂಘಟನೆಗಳು ಮತ್ತು ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ವಿಟ್ಟರ್ನಲ್ಲಿಯೂ ಸಹ ಹ್ಯಾಷ್ ಟ್ಯಾಗ್ನೊಂದಿಗೆ ರೀಚಾಭಾರತಿ ಎಂಬ ಆಂದೋಲನವನ್ನು ನಡೆಸಲಾಗುತ್ತಿದೆ. ರಾಂಚಿ ಜಿಲ್ಲಾ ಬಾರ್ ಅಸೋಸಿಯೇಷನ್ ಪ್ರತಿನಿಧಿಗಳು ಹಾಗೂ ನ್ಯಾಯಾಂಗ ಆಯುಕ್ತರ ಸಭೆಯಲ್ಲಿಯೂ ಸಹ ನ್ಯಾಯಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಅಲ್ಲದೆ, ನ್ಯಾಯಮೂರ್ತಿ ಮನೀಶ್ ಕುಮಾರ್ ಸಿಂಗ್ ಅವರನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವ ವರೆಗೆ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಏನಿದು ಪ್ರಕರಣ?
ಒಂದು ಧರ್ಮದ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕಾಗಿ 19 ವರ್ಷದ ವಿದ್ಯಾರ್ಥಿನಿ ರಿಚಾಳನ್ನು ಬಂಧಿಸಲಾಗಿತ್ತು. ಸೋಮವಾರ ರಾಂಚಿ ನ್ಯಾಯಾಲಯ ಪ್ರಕರಣದ ಕುರಿತು ವಿಚಾರಣೆ ನಡೆಸಿ, ಐದು ಕುರಾನ್ ಪ್ರತಿಗಳನ್ನು ಹಂಚುವಂತೆ ಆದೇಶ ನೀಡಿ ಜಾಮೀನು ನೀಡಿತ್ತು. ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು.

