ಹೈದರಾಬಾದ್: ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನಾಗಿ ಮಿಂಚಿದ್ದ ರಾಣಾ ದಗ್ಗುಬಾಟಿಗೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದಾರೆ.
ತೆಲುಗು ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ರಾಣಾ ದಗ್ಗುಬಾಟಿ ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದ್ ಮತ್ತು ಮುಂಬೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಚಿಕಾಗೋಗೆ ತನ್ನ ಕುಟುಂಬಸ್ಥರೊಂದಿಗೆ ತೆರಳಿದ್ದರು.
ಕಿಡ್ನಿ ಸಮಸ್ಯೆ ಇರುವ ಕಾರಣ ರಾಣಾ ದಗ್ಗುಬಾಟಿ ಗೆ ಕಿಡ್ನಿ ಕಸಿ ಅಗತ್ಯವಿದ್ದು ಅವರ ತಾಯಿ ಲಕ್ಷ್ಮಿ ಅವರೇ ಮೂತ್ರಪಿಂಡ ದಾನಕ್ಕೆ ಮುಂದಾಗಿದ್ದಾರೆ. ಸದ್ಯ ರಾಣಾ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಣಾ ಅವರು ಅಪಾಯದಿಂದ ಪಾರಾಗಿರುವುದರಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಣಾ ಅವರು ಸರಿ ಸುಮಾರು 1 ತಿಂಗಳು ವಿಶ್ರಾಂತಿಯಲ್ಲಿರಬೇಕಾಗುತ್ತದೆ. ಹೀಗಾಗಿ ಅವರು ಸೆಪ್ಟೆಂಬರ್ ನಿಂದ ಮತ್ತೆ ಶೂಟಿಂಗ್ ನಲ್ಲಿ ತೊಡಗಿಕೊಳ್ಳಲಿದ್ದಾರೆ. ವೇಣು ಉಡುಗಲ ಅವರ ನಿರ್ದೇಶನದ `ವಿರಾಟ ಪರ್ವಂ’ ಚಿತ್ರದಲ್ಲಿ ರಾಣಾ ಅಭಿನಯಿಸುತ್ತಿದ್ದಾರೆ.