ಚೆನ್ನೈ: ಬಿಗ್ಬಾಸ್ ಕಾರ್ಯಕ್ರಮ ಅಪಾರ ಪ್ರಮಾಣದ ಜನಮನ್ನಣೆಯನ್ನು ಪಡೆದುಕೊಂಡಿದೆ. ಯಾವ ಸ್ಪರ್ಧಿಗಳು ಬರುತ್ತಾರೆ ಎನ್ನುವ ಕುತೂಹಲದಂತೆ ಯಾರು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಇದೀಗ ತಮಿಳಿನಲ್ಲಿ ಪ್ರಸಾರವಾಗುವ ಬಿಗ್ಬಾಸ್ ಕಾರ್ಯಕ್ರಮದ ಕುರಿತಾಗಿರುವ ಸುದ್ದಿಯೊಂದು ಹರಿದಾಡುತ್ತಿದೆ.
ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ಪ್ರಸಾರವಾಗುವ ಬಿಗ್ಬಾಸ್ ಕಾರ್ಯಕ್ರಮ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಬದಲಾವಣೆಗಳು ಆಗುತ್ತಿವೆ. ತಮಿಳು ಬಿಗ್ಬಾಸ್ ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಈಗ ನಟಿ ರಮ್ಯಾ ಕೃಷ್ಣ ಆಗಮಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದನ್ನೂ ಓದಿ: ಕೋವಿಡ್ ಹೊಸ ರೂಪಾಂತರಿ ವೈರಾಣು ನಿಯಂತ್ರಣಕ್ಕೆ ಕ್ರಮ: ಸುಧಾಕರ್
ಕಮಲ್ ಹಾಸನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಕೆಲವೇ ದಿನಗಳ ಹಿಂದೆ ಖಚಿತಗೊಂಡಿತ್ತು. ಸದ್ಯ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಿಂದ ಬ್ರೇಕ್ ಪಡೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಿರೂಪಣೆಯ ಜಬಾವ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಕುತೂಹಲವೂ ಇತ್ತು. ಇನ್ನೊಂದೆಡೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರಿಗೆ ಈ ಕೆಲಸ ವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಹರಡಿತ್ತು. ಆದರೆ ಇವ್ಯಾವುವೂ ನಿಜವಾಗಿಲ್ಲ. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ
2019ರಲ್ಲಿ ಬಿಗ್ಬಾಸ್ ತೆಲುಗು ಸೀಸನ್ 3 ನಿರೂಪಣೆಯನ್ನು ನಾಗಾರ್ಜುನ ಮಾಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಕೆಲವು ವಾರಗಳ ಕಾಲ ನಿರೂಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಆಗ ರಮ್ಯಾಕೃಷ್ಣ ಅವರ ಸ್ಥಾನವನ್ನು ತುಂಬಿದ್ದರು. ಆ ಅನುಭವವನ್ನೇ ಇಟ್ಟುಕೊಂಡು ಅವರೀಗ ತಮಿಳು ಬಿಗ್ಬಾಸ್ ಸೀಸನ್ 5 ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಲ್ಲಿ ನಟಿಸಿರುವ ರಮ್ಯಾ ಕೃಷ್ಣ ಅವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಕೆಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ, ಜಡ್ಜ್ ಆಗಿ ಕೆಲಸ ಮಾಡಿದ ಅನುಭವವವೂ ಅವರಿಗೆ ಇದೆ. ಹೀಗಾಗಿ ಅವರು ಬಿಗ್ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.