ಬೆಂಗಳೂರು: ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವುದು ಪಕ್ಕಾ ಆಗಿದೆ. ಹಾಗಾಗಿಯೇ ಅವರು ಪದೇ, ಪದೇ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ, ಮಾಧ್ಯಮಗಳ ಮುಂದೆಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ನಡೆದ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ರಮ್ಯಾ ಹಾಜರಿದ್ದರು. ಅಂದು ರಾಧಿಕಾ ಪಂಡಿತ್, ಗಣೇಶ್, ನೆನಪಿರಲಿ ಪ್ರೇಮ್, ಹರಿಪ್ರಿಯಾ, ಪ್ರಿಯಾಂಕ ಉಪೇಂದ್ರ, ಉಪೇಂದ್ರ, ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗಲೂ ಕೂಡ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸು ಬರುವ ಕುರಿತು ಮಾತನಾಡಿದ್ದಾರೆ. ಹಾಗಾಗಿ ಸ್ಯಾಂಡಲ್ವುಡ್ ಪದ್ಮಾವತಿ ಮತ್ತೆ ತೆರೆಯ ಮೇಲೆ ಮಿಂಚೋದು ಪಕ್ಕಾ ಆಗಿದೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!
ಪುನೀತ್ ರಾಜ್ ಕುಮಾರ್ ನಿಧನರಾದ ಸಂದರ್ಭದಲ್ಲಿಯೂ ಕೂಡ ತಾವು ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಮಾತನಾಡಿದ್ದರು. ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ರಮ್ಯಾಗೆ ಕಾಲ್ ಮಾಡಿ, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಕೋರಿದ್ದರು. ಅಪ್ಪು ಮಾತಿಗೆ ರಮ್ಯಾ ಕೂಡ ಒಪ್ಪಿಗೆ ಸೂಚಿಸಿದ್ದರು. ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಪುನೀತ್ ಮತ್ತು ರಮ್ಯಾ ಕಾಂಬಿನೇಷನ್ನ ಚಿತ್ರ ಸೆಟ್ಟೇರುತ್ತಿತ್ತು. ಆದರೆ, ವಿಧಿ ಬೇರೆ ರೀತಿಯಲ್ಲಿಯೇ ಆಟವಾಡಿತು. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್ವುಡ್ ತಾರೆಯರ ಮೆರುಗು
ಭಾರೀ ಬೇಡಿಕೆ ಇರುವಾಗಲೇ ಸಿನಿಮಾ ರಂಗದಿಂದ ರಮ್ಯಾ ದೂರವಾದರು. ಆನಂತರ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಲ ತಿಂಗಳಿಂದ ಅವರು ರಾಜಕಾರಣದಲ್ಲೂ ಸಕ್ರಿಯರಾಗಿಲ್ಲ. ಸೋಶಿಯಲ್ ಮೀಡಿಯಾದ ಹೊರತಾಗಿ ರಮ್ಯಾ ಅವರ ಹಾಜರಾತಿ ಎಲ್ಲಿಯೂ ಇರುತ್ತಿರಲಿಲ್ಲ. ಇದೀಗ ಹೆಚ್ಚೆಚ್ಚು ಅವರು ಜನರ ಹತ್ತಿರಕ್ಕೆ ಬರುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಸೂಚನೆಗಳನ್ನು ನೀಡುತ್ತಿದ್ದಾರೆ.