ಬೆಂಗಳೂರು: ಅಯೋಧ್ಯೆ (Ayodhya) ರಾಮಲಲ್ಲಾನ (Ram Lalla) ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಇಂದು ಕೇಸರಿಮಯ ಆಗಿತ್ತು. ನಗರದ ಬಹುತೇಕ ಏರಿಯಾಗಳಲ್ಲಿ ಹಬ್ಬ ಸಂಭ್ರಮ ಮನೆ ಮಾಡಿದ್ರೆ, ನಗರದ ದೇವಾಲಯಗಳಲ್ಲಂತೂ ಸಹಸ್ರಾರು ಸಂಖ್ಯೆಯಲ್ಲಿ ಜನ ರಾಮನನ್ನ ಸ್ಮರಿಸಿದರು.
ರಾಮನೂರಿನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಿಂದೂ ಸಮಾಜದ ಕೋಟ್ಯಂತರ ಮಂದಿ ಸಂಭ್ರಮಿಸಿದ್ದಾರೆ. ಆ ಐತಿಹಾಸಿಕ ಕ್ಷಣಕ್ಕಾಗಿ ನೂರಾರು ವರ್ಷ ಕಾದಿದ್ದ ಹಿಂದೂ ಸಮಾಜದ ಮನಕ್ಕಿಂದು ಆ ಕ್ಷಣ ಜೀವನ ಪಾವನವಾಗಿಸಿದೆ. ಬೆಂಗಳೂರಲ್ಲೂ ಈ ಸಂಭ್ರಮ ಅದ್ಧೂರಿಯಾಗಿ ಆಚರಣೆಯಾಗಿದ್ದು, ರಾಮ ಭಕ್ತರ ಸಂಭ್ರಮಕ್ಕಿಂದು ಪಾರವೇ ಇರಲಿಲ್ಲ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ
ರಾಮಲಲ್ಲಾನ ಪ್ರಾಣಪ್ರತಿಷ್ಠೆ ಹಿನ್ನೆಲೆ ಬೆಳಗ್ಗೆಯಿಂದಲೇ ನಗರದ ಎಲ್ಲಾ ದೇವಾಲಯಗಳಲ್ಲೂ ಪೂಜೆ-ಪುನಸ್ಕಾರ ಜೋರಾಗಿತ್ತು. ವಿವಿಧ ಪೂಜೆ ಕೈಂಕರ್ಯ, ಅರ್ಚನೆ, ಹೋಮ, ಯಾಗಗಳ ಮೂಲಕ ಜನ ರಾಮನ ಭಕ್ತಿಯಲ್ಲಿ ಮುಳುಗಿದ್ದರು. ರಾಜಾಜಿನಗರದ ರಾಮಮಂದಿರ, ಗಾಳಿ ಆಂಜನೇಯಸ್ವಾಮಿ ದೇವಾಲಯ, ಶಿವಾಜಿನಗರ ರಾಮನ ದೇವಸ್ಥಾನ, ಸೇರಿದಂತೆ ಬಹುತೇಕ ಕಡೆ ಅದ್ಧೂರಿ ಅಲಂಕಾರಗಳ ಜೊತೆ ವಿಜೃಂಭಣೆಯ ಸಂಭ್ರಮ ನೇರವೇರಿತು. ಇನ್ನೂ ನಗರದ ಬಹುತೇಕ ದೇವಾಲಯಗಳಲ್ಲಿ ಅಯೋಧ್ಯೆ ಕಾರ್ಯಕ್ರಮ ನೇರಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿದ್ರೆ, ಇನ್ನೂ ಅನೇಕ ಕಡೆ ಅನ್ನ ಸಂತರ್ಪಣೆ, ಮಜ್ಜಿಗೆ ಪಾನಕಗಳನ್ನು ಹಂಚಿ ಜನ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಿಂದ ಹಿಂದಿರುಗಿದ ನಂತರ ನನ್ನ ಮೊದಲ ನಿರ್ಧಾರ – ಹೊಸ ಯೋಜನೆ ಘೋಷಿಸಿದ ಮೋದಿ
ನಗರದ ವಿದ್ಯಾಪೀಠದಲ್ಲೂ ವಿಶೇಷ ಪೂಜೆ ನೆರವೇರಿತು. ಶ್ರೀಕೃಷ್ಣನಿಗಿಂದು ರಾಮದೇವರ ಅಲಂಕಾರ ಮಾಡಿದ್ದು, ಈ ದಿನದ ವಿಶೇಷ. ದೇವಾಲಯದಲ್ಲಿ ರಾಮ ತಾರಕ ಹೋಮ ನೆರವೇರಿಸಿ, ಬಳಿಕ ನೂರಾರು ಸಂಖ್ಯೆಯಲ್ಲಿ ಜನ ನೇರಪ್ರಸಾರ ವೀಕ್ಷಣೆ ಮಾಡಿ, ನೂರಾರು ವರ್ಷಗಳ ಕನಸು ನನಸಾಗಿಸಿದ ಕ್ಷಣವನ್ನ ರಾಮ ಸ್ಮರಣೆ ಮೂಲಕ ಆನಂದಿಸಿದರು. ಇನ್ನೂ ಇದೇ ವೇಳೆ ಪ್ರತಿಷ್ಠಾನ ಕ್ಷಣ ನೆನೆದು ಅನೇಕ ಹಿರಿಯ ಜೀವಿಗಳು ಭಾವುಕರಾದರು. ಜೀವಿತಾವಧಿಯಲ್ಲಿ ಈ ಕ್ಷಣ ನೋಡುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ನಮ್ಮ ಕಣ್ಣುಗಳು ಅದೆಷ್ಟೋ ಪುಣ್ಯ ಮಾಡಿದ್ದವು. ಗುಡಿಸಲಿನಿಂದ ರಾಮ ಭವ್ಯ ಮಂದಿರಕ್ಕೆ ಬಂದಿರೋದು, ರಾಮ ಮತ್ತೆ ಹುಟ್ಟಿ ಬಂದಷ್ಟೇ ಸಂತಸ ಆಗುತ್ತಿದೆ ಎಂದು ಆನಂದಭಾಷ್ಪ ಸುರಿಸಿದರು. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ
ಇಷ್ಟೇ ಅಲ್ಲದೇ ರಾತ್ರಿ ಕೂಡ ನಗರದ ಬಹುತೇಕ ದೇವಾಲಯಗಳಲ್ಲಿ ದೀಪೋತ್ಸವ ನಡೆದಿದ್ದು, ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?