ಬೆಳಗಾವಿ: ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಯಾರದ್ದೋ ಮಾತು ಕೇಳಿ ದಾರಿ ತಪ್ಪುತ್ತಿದ್ದು, ಅವರಿಗೆ ಗಂಡಾಂತರ ಕಾದಿದೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಸ್ಲಂ ಪ್ರದೇಶದಲ್ಲಿ ಇದ್ದ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್. ಅವರ ತಾಯಿಗೆ ನಾವು ಏನು ಸಹಾಯ ಮಾಡಿದ್ದೇವೆ ಎನ್ನುವುದು ಗೊತ್ತು. ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಮದ್ರಾಸ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶುಲ್ಕ ಪಾವತಿಸಲಿಲ್ಲ. ಹೀಗಾಗಿ ಶಾಲೆಯ ಆಡಳಿತ ಮಂಡಳಿ ಆತನನ್ನು ಹೊರ ಹಾಕಿತ್ತು. ಆಗ ನಾನು ಒಂದಲ್ಲ ಎರಡು ಬಾರಿ ಚನ್ನರಾಜ್ ಶುಲ್ಕ ಕಟ್ಟಿರುವೆ. ಖಾನಾಪುರದಲ್ಲಿ ಹೆಬ್ಬಾಳ್ಕರ್ ಪತಿ ಮನೆಯನ್ನು ಹರಾಜು ಹಾಕಲಾಗುತ್ತಿತ್ತು. ಆಗಲೂ ನಾನು 8 ಲಕ್ಷ ರೂ. ಪಾವತಿಸಿ ಮನೆಯನ್ನು ಬಿಡಿಸಿ ಅವರಿಗೆ ಕೊಟ್ಟಿರುವೆ. ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಸಹಾಯ ಮಾಡಿರುವೆ. ಇದನ್ನು ಹೇಳಿಕೊಳ್ಳುವುದು ಸರಿಯಲ್ಲ. ಆದರೆ ನನ್ನ ಕುಟುಂಬಕ್ಕೆ ಅವಮಾನ ಮಾಡಲು ಮುಂದಾಗಿದ್ದರಿಂದ ಹೇಳಲೇಬೇಕಾಯಿತು ಎಂದು ತಿರುಗೇಟು ಕೊಟ್ಟರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾನೂನು ಅರಿವು ಇಲ್ಲ. ಅದನ್ನು ತಿಳಿಯಬೇಕಾದ ಅನಿವಾರ್ಯತೆ ಇದೆ. ಒಬ್ಬರ ಕುಟುಂಬದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ದೂರಿದ ಸಚಿವರು, ಹಣದಿಂದ ಶಾಸಕ ಆಗುತ್ತೇನೆ ಎನ್ನುವುದು ತಪ್ಪು ಕಲ್ಪನೆ. ಎಲ್ಲದಕ್ಕೂ ಜನ ಬೆಂಬಲ ಬೇಕಾಗುತ್ತದೆ. ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ನಾನು ತಟಸ್ಥನಾಗಿದ್ದೇನೆ. ಅದನ್ನು ಸತೀಶ್ ಜಾರಕಿಹೊಳಿ ನೋಡಿಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಮಧ್ಯಸ್ಥಿಕೆವಹಿಸಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಬೆಲೆ ಏನು ಅಂತಾ ಜಿಲ್ಲೆಯ ಜನತೆಗೆ ಗೊತ್ತಿದೆ. ಈಗ ಅವರು ಬೆಂಗಳೂರಿಗೆ ಹೋಗಿ ಶೋ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕ್ಷಮಿಸಲ್ಲ-ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv