ಬೆಳಗಾವಿ: ಪುನೀತ್ ರಾಜಕುಮಾರ್ ಅವರು ಇಷ್ಟು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆಂದ್ರೆ ನಂಬಲಿಕ್ಕೆ ಸಾಧ್ಯವಿಲ್ಲ. ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ ಎಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಶಾಸಕ ರಮೇಶ್ ಜಾರಕಿಹೊಳಿ ಭಾವುಕರಾದರು.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿ ಸಂಘ ಹುದಲಿಯಲ್ಲಿ ‘ಅಪ್ಪುಗೆ ನುಡಿ ಗೀತನಮನ ಹಾಗೂ ಅನ್ನ ಸಂತರ್ಪಣೆ’ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಮ್ಮ ಚಿತ್ರರಂಗ ಬಡವಾಗಿದೆ. ಸೂರ್ಯಚಂದ್ರ ಇರೋವರೆಗೂ ಅವರ ನೆನಪು ಸದಾಕಾಲ ಇರುತ್ತೆ. ಅವರ ಮನೆತನದಲ್ಲೇ ಪುನೀತ್ ರಾಜ್ಕುಮಾರ್ ಬಹಳ ಒಳ್ಳೆಯ ಹುಡುಗ. ಅವರು ಹಿರಿಯರನ್ನು ತುಂಬಾ ಗೌರವಿಸುತ್ತಿದ್ದರು ಎಂದು ನೆನೆದು ಭಾವುಕರಾದರು. ಇದನ್ನೂ ಓದಿ: ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ
1992ರ ಡಿಸೆಂಬರ್ 6 ರಂದು ಗೋಕಾಕ್ನ ನಮ್ಮ ನಿವಾಸಕ್ಕೆ ರಾಜ್ಕುಮಾರ್ ಅವರು ಇಡೀ ಕುಟುಂಬ ಬಂದಿತ್ತು. ಆಗ ಪುನೀತ್ ಅವರಿಗೆ 16 ರಿಂದ 17 ವಯಸ್ಸಿರಬೇಕು. ನಮ್ಮ ತಂದೆ-ತಾಯಿ ಕಾಲಿಗೆ ಹಣೆ ಹಚ್ಚಿ ನಮಸ್ಕಾರ ಮಾಡಿದ್ದರು. ಪುನೀತ್ ಅವರ ಬಗ್ಗೆ ಮಾತನಾಡಬೇಕಂದ್ರೆ ತುಂಬಾ ದುಃಖ ಆಗ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಪ್ಪು ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕಿತ್ತೂರು ಕಲ್ಮಠದ ಸ್ವಾಮೀಜಿ, ಲಖನ್ ಜಾರಕಿಹೊಳಿ ಸೇರಿ ಹಲವರು ಉಪಸ್ಥಿತರಿದ್ದರು.