– ಇಬ್ಬರಿಂದ ಒಂದೇ ದೇವಾಲಯದಲ್ಲಿ ವಿಶೇಷ ಪೂಜೆ
– ಕಾಮಾಕ್ಯ ದೇವಾಲಯಕ್ಕೆ ತೆರಳಿದ್ದಾರೆ ಜಾರಕಿಹೊಳಿ
ಬೆಂಗಳೂರು: ಅಸ್ಸಾಂನಲ್ಲಿರುವ ಕಾಮಾಕ್ಯ ದೇವಾಲಯದ ರಕ್ತ ಕಲ್ಯಾಣಿಯಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಶುಕ್ರವಾರದ ಪೂಜೆ ಸಲ್ಲಿಸಲಿದ್ದಾರೆ. ಅವರ ಬದ್ಧ ವೈರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಇದೇ ದೇಗುಲದಲ್ಲಿ ಅಮಾವಾಸ್ಯೆ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ರಮೇಶ್ ಕೂಡ ಪೂಜೆಗೆ ತೆರಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಮುನಿಸು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ ಶತ್ರುಗಳ ಕೈ ಮೇಲಾಗದಂತೆ ತಮ್ಮ ಮನದ ಇಚ್ಚೆ ಈಡೇರುವಂತೆ ರಮೇಶ್ ಸಂಕಲ್ಪ ಮಾಡಿದ್ದು, ಕಾಮಾಕ್ಯದ ರಕ್ತ ಕಲ್ಯಾಣಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಹೀಗೆ ಬದ್ಧ ವೈರಿಗಳಿಬ್ಬರು ಶತ್ರುಗಳಿಬ್ಬರು ಒಂದೇ ದೇವರ ಮೊರೆ ಹೋಗಿರುವುದು ವಿಶೇಷ.
ಆಗಸ್ಟ್ 18ರಂದು ಅಸ್ಸಾಂನ ಕಾಮಾಕ್ಯದಲ್ಲಿ ಡಿಕೆಶಿ ಅವರು ಅಮಾವಾಸ್ಯೆ ಪೂಜೆ ಮಾಡಿಸಿದ್ದರು. ಇಡಿ ಸಂಕಷ್ಟದಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದರು. ಡಿಕೆಶಿ ಬಂಧನಕ್ಕೆ ಒಳಗಾದ ಬೆನ್ನಲ್ಲೆ ರಮೇಶ್ ಜಾರಕಿಹೊಳಿಯಿಂದಲೂ ಕಾಮಾಕ್ಯದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಶತ್ರುವಿನ ಕೈ ಮೇಲಾಗದಂತೆ ಮೂಲಾಧಾರ ಚಕ್ರ ಜಾಗೃತಿಗಾಗಿ ರಕ್ತ ಕಲ್ಯಾಣಿಯಲ್ಲೇ ಪೂಜೆ ಮಾಡಿಸಲಾಗುತ್ತಿದೆ ಎನ್ನಲಾಗಿದೆ.
ಈ ಮೂಲಕ ತಮ್ಮ ಬದ್ಧ ಶತ್ರು ಸಂಕಷ್ಟದಿಂದ ಪಾರಾಗಲು ಪೂಜೆ ಸಲ್ಲಿಸಿದ್ದ ಸ್ಥಳದಲ್ಲಿಯೇ ರಮೇಶ್ ಅವರು ಕೂಡ ಪೂಜೆ ಮಾಡಿಸಲು ನಿರ್ಧರಿಸಿದ್ದಾರೆ. ಆದ್ದರಿಂದ ಡಿಕೆಶಿ ಶಕ್ತಿ ಕುಂದಲಿ, ಹಿನ್ನೆಡೆಯಾಗಲಿ ಅನ್ನೋ ಕಾರಣಕ್ಕೆ ಪೂಜೆ ಮಾಡಿಸಲಿದ್ದಾರಾ ಸಾಹುಕಾರ? ಅಥವಾ ಬೇರೆ ಕಾರಣ ಏನು? ಡಿಕೆಶಿ ಪೂಜೆ ಸಲ್ಲಿಸಿದ ಸ್ಥಳದಲ್ಲೇ ರಮೇಶ್ ಜಾರಕಿಹೊಳಿ ಪೂಜೆ ಮಾಡಿಸುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.