ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಆಕೆ ಎಲ್ಲಿ ಕಾಲಿಡುತ್ತಾಳೋ ಅಲ್ಲಿ ಸರ್ವನಾಶವಾಗುತ್ತದೆ. ಆಕೆಯಿಂದ ಇಂದು ಪಕ್ಷ ನಾಶವಾಗಿದೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಉಪಸಮರದ ಗೆಲುವಿನ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ. ಆಕೆ ಯಾವ ಪಕ್ಷದಲ್ಲಿರುತ್ತಾಳೆ ಆ ಪಕ್ಷದ ಸರ್ವನಾಶವಾಗುತ್ತದೆ. ಆಕೆ ತನ್ನ ಮಿತಿಯಲ್ಲಿದ್ದರೆ ಒಳ್ಳೆಯದು. ಆಕೆಯಿಂದಲೇ ಇಂದು ಕಾಂಗ್ರೆಸ್ ಪಕ್ಷ ಹಾಳಾಗಿದೆ. ಆಕೆ ಹೆಣ್ಣುಮಗಳಾಗಿ ಹೆಣ್ಣುಮಗಳ ರೀತಿ ಇದ್ದರೆ ಒಳ್ಳೆಯದು. ಗಂಡಸರು ಗಂಡಸರಾಗಿದ್ದರೆ ಒಳ್ಳೆಯದು. ಅಧಿಕಾರ ಬರುತ್ತೆ ಹೋಗುತ್ತೆ, ಅಧಿಕಾರ ಶಾಶ್ವತವಲ್ಲ. ಆಕೆಗೆ ಒಳ್ಳೆಯದು ಮಾಡುವುದು ಗೊತ್ತಿಲ್ಲ. ಕ್ಲಬ್ ಮತ್ತು ಇತರೆ ವ್ಯವಹಾರ ಮಾಡಲು ಜನರನ್ನು ವೋಟ್ ಕೇಳಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಅವರು ನನಗೆ ಕರೆ ಮಾಡಿದ್ದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾಳೆ. ದೇವರ ಆಣೆ ಮಾಡಿ, ನನ್ನ ಎರಡು ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಬಿಜೆಪಿ ಆಕೆಗೆ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಗೊಡ್ಡು ಕೊದುರೆ ಏನು ಕೊಟ್ಟಿದೆ, ಡ್ಯಾಶ್ ಡ್ಯಾಶ್ ಆಕೆಗೆ ಗೊತ್ತು ಎಂದು ಏನವಚನದಲ್ಲೇ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಬಿಎಸ್ವೈ ಮಾತು ನೀಡಿದರೆ ತಪ್ಪಲ್ಲ. ಅವರು ಕೊಟ್ಟ ಭರವಸೆ ಈಡೇರಿಸುತ್ತಾರೆ. ಅವರು ಈ ವಯಸ್ಸಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಅವರನ್ನು ರಮೇಶ್ ಹಾಡಿಹೊಗಳಿದರು. ಆ ಬಳಿಕ ಮಾಜಿ ಸ್ಪೀಕರ್ ತಮ್ಮನ್ನು ಅನರ್ಹರು ಎಂದು ಆದೇಶಿದ ಬಗ್ಗೆ ಪ್ರತಿಕ್ರಿಯಿಸಿ, ರಮೇಶ್ ಕುಮಾರ್ ಅಯೋಗ್ಯ ತಕ್ಷಣವೇ ಆತ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇಂದು ಕೂಡ ಸಿದ್ದರಾಮಯ್ಯ ನಮ್ಮ ನಾಯಕರೇ. ನಾನು ಬೇರೆ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ಹೀಗಾಗಿ ಅವರು ಅವರ ಕೆಲಸ ಅವರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಸಿದ್ದರಾಮಯ್ಯ ಅವರಿಗೆ ನಾನು ಮೊದಲೇ ಹೇಳಿದ್ದೆ, ನೀವು ವೈಯಕ್ತಿಕ ಟೀಕೆ ಮಾಡಿದರೆ ನನ್ನ ಬಳಿಯೂ ಅಸ್ತ್ರವಿದೆ ಎಂದಿದ್ದೆ. ಆಗ ಸಿದ್ದರಾಮಯ್ಯ ಅವರು ಏನು ಮಾತನಾಡಿಲ್ಲ ಎಂದರು.
ಶಾಸಕ ಜಮೀರ್ ಗೆ ವಿಷಯ ಗೊತ್ತಿದ್ದರೆ ಸಿದ್ದರಾಮಯ್ಯ ಅವರಿಗೆ ಗೊತ್ತಿರದೆ ಹೋಗುತ್ತಾ? ಅವರ ಬಗ್ಗೆ ಅನೇಕ ವಿಷಯಗಳಿದೆ. ಅದೆನ್ನೆಲ್ಲಾ ಹೇಳಿದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ನಾನು ಪಕ್ಷಕ್ಕೆ ಮೋಸ ಮಾಡಿದೆ, ವಂಚನೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಜೆಡಿಎಸ್ಗೆ ಚೂರಿ ಹಾಕಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದಾರೆ ಎಂದು ತಿರುಗೇಟು ನೀಡಿದರು.