ಬೆಂಗಳೂರು: ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಸರಳತೆಗೆ ನಟ ರಮೇಶ್ ಅರವಿಂದ್ ಫಿದಾ ಆಗಿದ್ದಾರೆ.
ಇತ್ತೀಚೆಗೆ ಜೀ ವಾಹಿನಿಯ “ಹೆಮ್ಮೆಯ ಕನ್ನಡಿಗ 2019” ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಜನಸಾಮಾನ್ಯರಂತೆ ಜೀವಿಸುವ ಸುಧಾ ಮೂರ್ತಿಯವರ ಸರಳತೆ ಕಂಡು ನಟ ರಮೇಶ್ ಮೆಚ್ಚಿಕೊಂಡರು.
ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಮೇಲೆ, ನಿರೂಪಕರಾದ ನಟ ರಮೇಶ್ ಅರವಿಂದ್ ಹಾಗೂ ನಟಿ ವಿನಯಾ ಪ್ರಕಾಶ್ ಅವರು `ಮೇಡಂ, ನಿಮ್ಮ ಸರಳ ಹಾಗೂ ಅನುಕರಣೀಯ ವ್ಯಕ್ತಿತ್ವದ ಮೂಲಕ ನೀವು ನಮಗೆ ತುಂಬಾ ಇಷ್ಟವಾಗುತ್ತಿದ್ದೀರಿ’ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಜನಸಾಮಾನ್ಯರಂತೆ ಕೆಲಸ ಮಾಡುತ್ತಿದ್ದಾಗ ತೆಗೆದ ಫೋಟೋವನ್ನು ತೋರಿಸಿದ್ದಾರೆ. ಅದನ್ನು ನೋಡಿದ ಸುಧಾ ಮೂರ್ತಿಯವರು ಆ ಫೋಟೋ ಯಾವಾಗ ತೆಗೆದಿದ್ದು ಎಂಬುದರ ಬಗ್ಗೆ ವೇದಿಕೆಯಲ್ಲೇ ಹಂಚಿಕೊಂಡಿದ್ದಾರೆ.
ನಾನು ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಹೂ ಕಟ್ಟಲೆಂದು ಹೋಗಿದ್ದೆನು. ವರ್ಷದಲ್ಲಿ ಒಮ್ಮೆ ಅಲ್ಲಿ ಅವಕಾಶ ಸಿಗುತ್ತದೆ. ನಾನು ಅಲ್ಲಿಗೆ ಹೋಗಿ ಎಲ್ಲರೊಂದಿಗೆ ಕುಳಿತು ಹೂ ಕಟ್ಟಿದ್ದು ತುಂಬಾ ಖುಷಿಯಾಯ್ತು ಅಂದ್ರು. ಇನ್ನೊಂದು ಫೋಟೋ ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್ನಲ್ಲಿರುವ ರಾಯರ ಮಠದಲ್ಲಿ ನಾನು ತರಕಾರಿ ಹೆಚ್ಚುತ್ತಿರುವಾಗ ಕ್ಲಿಕ್ಕಿಸಿದ ಫೋಟೋ ಎಂದು ಸಂತೋಷದ ನಗು ಬೀರಿದರು.
ಸುಧಾ ಮೂರ್ತಿ ಅವರು ಕನ್ನಡಿಗರ ಹೆಮ್ಮೆ. ಅವರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಕೊಂಚ ಕೂಡ ಅಹಂ ಇಲ್ಲದೆ ಸರಳವಾಗಿ ಬದುಕಿ ಎಲ್ಲರ ಮನ ಗೆದ್ದವರು. ಇತ್ತೀಚೆಗೆ, ಪ್ರಶಸ್ತಿಯೊಂದನ್ನು ಸ್ವೀಕರಿಸಿ ಮಾತನಾಡಿದ ಸುಧಾ ಮೂರ್ತಿ, ಮನುಷ್ಯನಿಗೆ ದುಡ್ಡು ಬಂದಾಗ ಮಾನವೀಯತೆ ಮರೆತು ಹೋಗಬಾರದು ಎಂದು ನನಗೆ ನನ್ನ ಹೆಮ್ಮೆಯ ಹಿರಿಯರು ಹೇಳಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಸುಧಾಮೂರ್ತಿ ಈ ರೀತಿ ಹೇಳುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ನೆರೆದವರ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತ್ತು.