ರಾಮನಗರ: ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈ ಚಳಕ ತೋರಿ, ಮೂವರ ಬಳಿ 90 ಸಾವಿರ ರೂ. ಎಗರಿಸಿದ ಘಟನೆ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಬ್ಯಾರೇಜ್ ಬಳಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಗುಡಿಸರಗೂರು ನಿವಾಸಿ ಕೃಷ್ಣ 25 ಸಾವಿರ ರೂ. ಸೋಗಾಲದೊಡ್ಡಿಯ ಬಸವರಾಜ್ 15 ಸಾವಿರ ರೂ. ಹಾಗೂ ಹಾಗಲಹಳ್ಳಿಯ ಶಿವಲಿಂಗಯ್ಯ ಎಂಬುವರ 50 ಸಾವಿರ ರೂ. ವನ್ನು ಕಳ್ಳರು ದೋಚಿದ್ದಾರೆ.
ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಇಂದು ಆಗಮಿಸಿದ ಸಿಎಂ ಇಗ್ಗಲೂರು ಬ್ಯಾರೇಜ್ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿಯಿತು. ಈ ವೇಳೆ ಕೈಚಳಕ ತೋರಿದ ಕಳ್ಳರು ಮೂವರ ಜೇಬಿಗೆ ಕತ್ತರಿಹಾಕಿ ಒಟ್ಟು 90 ಸಾವಿರ ರೂ. ದೋಚಿದ್ದಾರೆ.
ಇಗ್ಗಲೂರು ಬ್ಯಾರೇಜ್ಗೆ 9 ಗಂಟೆಗೆ ಆಗಮಿಸಬೇಕಿದ್ದ ಸಿಎಂ 4 ಗಂಟೆ ತಡವಾಗಿ ಆಗಮಿಸಿದರು. ಗುರುತ್ವಾಕರ್ಷಣೆಯ ಬಲದಿಂದ ಇಗ್ಗಲೂರು ಬ್ಯಾರೇಜ್ಗೆ ಕಾವೇರಿ ನೀರು ಹರಿಸುವ 540 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಿಎಂ ಚಾಲನೆ ನೀಡಿದರು.