ರಾಮನಗರ: ಒಂದೆಡೆ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಸರ್ಕಾರದ ಬುಡ ಅಲ್ಲಾಡುತ್ತಿದ್ದರೆ ಇತ್ತ ಸಿಎಂ ಕ್ಷೇತ್ರದಲ್ಲಿ ಕಾರ್ಯಕರ್ತರ ಮಧ್ಯೆ ವಾರ್ ಆರಂಭಗೊಂಡಿದೆ.
ಕಾಂಗ್ರೆಸ್, ಜೆಡಿಎಸ್ ಶಾಸಕರು ಹಾಗೂ ಪಕ್ಷೇತರ ಶಾಸಕರು ಕೂಡ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡಿದ್ದಾರೆ. ಇತ್ತ ಸಿಎಂ ಸರ್ಕಾರ ಉಳಿಸಿಕೊಳ್ಳಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಆದರೆ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಆರಂಭಗೊಂಡಿದೆ.
ಶಾಸಕರ ರಾಜೀನಾಮೆಯ ಹಿಂದೆ ಮಾಜಿ ಸಚಿವ ಯೋಗೇಶ್ವರ್ ತಂತ್ರವಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯನ್ನು ಮುಂದಿಟ್ಟುಕೊಂಡು ಯೋಗೇಶ್ವರ್ ಅಭಿಮಾನಿಗಳು, ಯೋಗಿಶ್ವರ್ ತಾಕತ್ತು ದೇಶಕ್ಕೆ ಗೊತ್ತಾಯ್ತು. ಡಿಕೆಶಿ ಹಾಗೂ ಸಿಎಂ ಸೇರಿ ಕಳೆದ ಚುನಾವಣೆಯಲ್ಲಿ ಕುತಂತ್ರ ಮಾಡಿ ನಮ್ಮ ನಾಯಕ ಯೋಗೇಶ್ವರ್ ಅವರ ಎಂಎಲ್ಎ ಸ್ಥಾನ ಕಿತ್ತುಕೊಂಡಿದ್ದರು. ಆದರೆ ಇವತ್ತು ನಮ್ಮ ನಾಯಕ ಡಿಕೆಶಿಯ ಮಂತ್ರಿಗಿರಿ ಹಾಗೂ ಸಿಎಂ ಅವರ ಮುಖ್ಯಮಂತ್ರಿಗಿರಿಯನ್ನು ಕಿತ್ತುಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.
ಈ ಪೋಸ್ಟ್ಗೆ ನೀಡಿರುವ ಕೈ-ದಳ ಕಾರ್ಯಕರ್ತರು ರಾಜೀನಾಮೆ ವಿಚಾರದಲ್ಲಿ ನಕಲಿ ಸೈನಿಕನ ಪಾತ್ರ ಏನು ಇಲ್ಲ, ಕೇವಲ ವಾಚ್ ಮೆನ್ ಕೆಲಸ ಅಷ್ಟೇ ಎಂದು ಕಾಲೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.